ಸಂಪಾಜೆ ಹಿರಿಯ ಕಾಂಗ್ರೆಸಿಗ ಸೋಮಶೇಖರ ಕೊಯಿಂಗಾಜೆ ಬರೆಯುತ್ತಾರೆ.
“ಸಂಪಾಜೆ ಗ್ರಾಮದ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಶ್ರಮಿಸುವ ಪಕ್ಷದ ಎಲ್ಲಾ ಪ್ರೀತಿಯ ನಿಷ್ಠಾವಂತ ಕಾರ್ಯಕರ್ತರಿಗೆ ನಮಸ್ಕಾರಗಳು. ಸುಳ್ಯ ಬ್ಲಾಕ್ ಕಾಂಗ್ರೆಸ್ ಇದೀಗ ನೂತನ ಸಮಿತಿಯನ್ನು ಬಿಡುಗಡೆ ಮಾಡಿದೆ. ಬಹುಶಃ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಒಳ್ಳೆಯ ಗೌರವ ಸಿಕ್ಕಿದೆ!


ಸತತವಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸುತ್ತಿರುವ ನಾಯಕರನ್ನು ಕಡೆಗಣಿಸಿ, ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯದೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಹಾಗೂ ನಾಯಕರ ತೀರ್ಮಾನವನ್ನು ಗೌರವಿಸದವರಿಗೆ ಕಾರ್ಯದರ್ಶಿ ಹುದ್ದೆ ನೀಡಿರುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ? ಆದುದರಿಂದ, ನಿಷ್ಠೆಯಿಂದ ಪ್ರಾಮಾಣಿಕವಾಗಿ ಪಕ್ಷದ ಉಳಿವಿಗಾಗಿ ನಾಯಕತ್ವ ವಹಿಸಿ ಶ್ರಮಿಸಿರುವ ನನ್ನಂತಹ ಕಾರ್ಯಕರ್ತನಿಗೆ ಇದು ಆತ್ಮಗೌರವಕ್ಕೆ ಬಹಳ ನೋವನ್ನು ಕೊಟ್ಟಿದೆ.
ಹಿಂದೆ ನಾನೇ ಸ್ವತಃ ಖರ್ಚು ಮಾಡಿ, ನಿಮ್ಮೆಲ್ಲರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಾಗ, ನೈಜ ನಿಷ್ಠಾವಂತರಿಗೆ ಆಗುತ್ತಿರುವ ಅನ್ಯಾಯಕ್ಕೆ ಮನನೊಂದು ವಲಯ ಗ್ರಾಮ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ತದನಂತರ ಪಕ್ಷ ನನ್ನಂತಹವರಿಗೆ ಯಾವ ರೀತಿಯ ಗೌರವ ನೀಡುತ್ತದೆ ಎಂಬುದು ನನಗೆ ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾನು ನನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮುಂದಿನ ನಿರ್ಧಾರ ಮಾಡಲು ನಿರ್ಧರಿಸಿದ್ದೇನೆ. ಇದಕ್ಕೆ ಅವಕಾಶ ನೀಡಿದ ಪಕ್ಷದ ನಾಯಕರುಗಳಿಗೆ ನನ್ನ ಅಭಿನಂದನೆಗಳು.



ಇದನ್ನು ನಿಮಗೆ ತಿಳಿಸುವುದು ನನ್ನ ಕರ್ತವ್ಯ. ಏಕೆಂದರೆ, ನನ್ನ ಜೊತೆ ಪಕ್ಷವನ್ನು ಕಟ್ಟಿ ಬೆಳೆಸಲು ನೀವು ಮಾಡಿದ ತ್ಯಾಗ ಹಾಗೂ ಬೆಂಬಲವನ್ನು ನಾನು ಯಾವತ್ತೂ ಮರೆಯುವುದಿಲ್ಲ. ಇದು ನನ್ನ ಸ್ಪಷ್ಟ ನಿರ್ಧಾರ. ಮುಂದೆ ನಿಮ್ಮೆಲ್ಲರ ಪ್ರೀತಿ, ಬೆಂಬಲ ಹಾಗೂ ಹಾರೈಕೆಗಳು ಸದಾ ನನ್ನ ಮೇಲಿರಲಿ. ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಕ್ಷದ ಏಳಿಗೆಗಾಗಿ ಶ್ರಮಿಸಲಿ. ನಿಷ್ಠಾವಂತರಿಗೆ ಮತ್ತು ಪಕ್ಷನಿಷ್ಠರಿಗೆ ಪಕ್ಷವು ‘ಒಳ್ಳೆಯ ಬಹುಮಾನ ಮತ್ತು ಗೌರವ’ವನ್ನೇ ನೀಡಿದೆ!”





