



ಸುಳ್ಯ: ಕಳೆದ ಕೆಲವು ದಿನಗಳಿಂದ ಸುಳ್ಯ ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ದುಸ್ತರಗೊಂಡಿದ್ದು, ಹಲವೆಡೆ ಆಸ್ತಿ-ಪಾಸ್ತಿಗಳಿಗೆ ಹಾನಿ ಸಂಭವಿಸಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ನಿರಂತರ ಮಳೆಗೆ ಮಣ್ಣು ಸಡಿಲಗೊಂಡು ಕಾಂಪೌಂಡ್ ಗೋಡೆಗಳು ಹಾಗೂ ಗುಡ್ಡಗಳು ಜರಿದು ಬೀಳುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಗುತ್ತಿಗಾರು ಗ್ರಾಮದಲ್ಲಿ ವಾಸವಾಗಿರುವ ಮಾಜಿ ಸೈನಿಕ ಮಹೇಶ್ ಕೊಪ್ಪತಡ್ಕ ಅವರ ಮನೆಯ ಕಾಂಪೌಂಡ್ ಗೋಡೆಯು ಮಳೆಯ ರಭಸಕ್ಕೆ ಸಂಪೂರ್ಣವಾಗಿ ಜರಿದು ಬಿದ್ದಿದೆ. ಸುರಿದ ಮಳೆಗೆ ಮಣ್ಣು ಕುಸಿದು ತಡೆಗೋಡೆ ನೆಲಸಮಗೊಂಡಿದ್ದು, ಮನೆಗೂ ಭಾಗಶಃ ಅಪಾಯ ಎದುರಾಗುವ ಭೀತಿ ಉಂಟಾಗಿದೆ. ಅದೃಷ್ಟವಶಾತ್ ಘಟನೆಯ ಸಮಯದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಹಲವು ಕಡೆಗಳಲ್ಲಿ ಖಾಸಗಿ ಆಸ್ತಿಗಳ ಹಾಗೂ ರಸ್ತೆ ಬದಿಯ ಕಾಂಪೌಂಡ್ ಗೋಡೆಗಳು ಕುಸಿದು ಬಿದ್ದಿವೆ. ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಸಣ್ಣಪುಟ್ಟ ಗುಡ್ಡಜರಿತಗಳು ಉಂಟಾಗುತ್ತಿದ್ದು, ರಸ್ತೆಗಳಿಗೆ ಮಣ್ಣು ಮತ್ತು ಮರಗಳು ಉರುಳಿಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನದಿ ಹಾಗೂ ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳ ಜನ ಜಾಗರೂಕತೆಯಿಂದ ಇರಬೇಕಿದೆ.




