ಪುತ್ತೂರು: ಕೆಯ್ಯುರು ಗ್ರಾಮದ ಮಾಡಾವು ಸಣಂಗಳ ಮೂಲದ ವಿವಾಹಿತ ಯುವತಿಯೊಬ್ಬರು ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಸಮೀಪದ ಬೆಳ್ಳೂರು ಪಳ್ಳಪ್ಪಾಡಿಯಲ್ಲಿರುವ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೇ 27 ರಂದು ಈ ದುರಂತ ಘಟನೆ ಬೆಳಕಿಗೆ ಬಂದಿದ್ದು, ಯುವತಿಯ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕಾಸರಗೋಡಿನ ಆದೂರು ಪೊಲೀಸ್ ಠಾಣೆಯಲ್ಲಿ ‘ಅನುಮಾನಾಸ್ಪದ ಸಾವು’ ಎಂದು ಪ್ರಕರಣ ದಾಖಲಾಗಿದೆ.

ಮೇ 29ರಂದು (ಇಂದು) ಮೃತ ಯುವತಿಯ ವಿವಾಹ ವಾರ್ಷಿಕೋತ್ಸವವಾಗಿದ್ದು, ಮದುವೆಯಾಗಿ ಭರ್ತಿ ನಾಲ್ಕು ವರ್ಷಗಳಾಗಿದ್ದವು. ಆದರೆ, ದಂಪತಿಗೆ ಮಕ್ಕಳಾಗಿರಲಿಲ್ಲ ಎನ್ನಲಾಗಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಪತಿ ಜೈನುದ್ದೀನ್ ಮತ್ತು ಅವರ ಮನೆಯವರು ಯುವತಿಗೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಸಹೋದರ ಗಂಭೀರವಾಗಿ ಆರೋಪಿಸಿದ್ದಾರೆ.

ಗಂಡನ ಮನೆಯವರ ನಿರಂತರ ಕಿರುಕುಳ ತಾಳಲಾರದೇ ತನ್ನ ಸಹೋದರಿ ಆತ್ಮಹತ್ಯೆ ಶರಣಾಗಿದ್ದಾಳೆ ಎಂದು ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಆದೂರು ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಯುವತಿಯ ಸಾವಿನ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಿದ್ದಾರೆ.



