2024ರ ಐಪಿಎಲ್ ಸೀಸನ್ ನಡೆಯುತ್ತಿರುವಾಗ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಪ್ಯಾಟ್ ಕಮ್ಮಿನ್ಸ್ ಡ್ರೆಸ್ಸಿಂಗ್ ರೂಮ್ನಲ್ಲಿ ಒಂದು ಭಾಷಣ ಮಾಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮೊದಲು ಬ್ಯಾಟ್ ಮಾಡಿ 287 ರನ್ ಗಳಿಸಿ ಪಂದ್ಯವನ್ನು ಗೆದ್ದ ನಂತರ ಕಮ್ಮಿನ್ಸ್ ಮಾತನಾಡಿದ್ದರು ಆ ಭಾಷಣದ ಪ್ರಮುಖ ಭಾಗ ಹೀಗಿತ್ತು-
”ನಮ್ಮ ವಿರುದ್ಧ ಆಡಲು ಎಲ್ಲಾ ತಂಡಗಳೂ ಭಯಪಡುತ್ತಿವೆ. ಕೆಲವು ತಂಡಗಳು ಮೈದಾನಕ್ಕೆ ಇಳಿಯುವ ಮುನ್ನವೇ ನಮ್ಮೆದುರು ಸೋಲೊಪ್ಪಿಕೊಳ್ಳುತ್ತಿವೆ…!”ಕಮ್ಮಿನ್ಸ್ ನಾಯಕತ್ವದಲ್ಲಿ ಸನ್ರೈಸರ್ಸ್ ಅತ್ಯಂತ ಸ್ಫೋಟಕವಾದ ಆಟವನ್ನು ಆಡುತ್ತಿತ್ತು. ಅವರು ಮೊದಲು ಬ್ಯಾಟ್ ಮಾಡಿದಾಗಲೆಲ್ಲಾ 300 ರನ್ ಗಳಿಸುತ್ತಾರೆ ಎಂದೇ ನಮಗೆ ಅನಿಸುತ್ತಿತ್ತು! ಎದುರಾಳಿಗಳು ಎಷ್ಟೇ ದೊಡ್ಡ ಸ್ಕೋರ್ ಕಲೆಹಾಕಿದರೂ ಸನ್ರೈಸರ್ಸ್ ಅದನ್ನು ಚೇಸ್ ಮಾಡಿ ಗೆಲ್ಲುತ್ತದೆ ಎಂದು ಎಲ್ಲರೂ ನಂಬಿದ್ದರು! ಈ ಮಾನಸಿಕ ಪ್ರಾಬಲ್ಯದ ಬಗ್ಗೆಯೇ ಕಮ್ಮಿನ್ಸ್ ಅಂದು ಮಾತನಾಡಿದ್ದರು!ಅಂತಹ ಸನ್ರೈಸರ್ಸ್ ತಂಡ 2026ರ ಐಪಿಎಲ್ನಿಂದ ಹೊರಬಿದ್ದಿದೆ!

ಮದವೇರಿದ ಆನೆಗಳಂತೆ ನಿಂತಿದ್ದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ ಮತ್ತು ಇಶಾನ್ ಕಿಶನ್ ಅವರನ್ನು ಒಬ್ಬ 15 ವರ್ಷದ ಹುಡುಗ ಬಹುತೇಕ ಏಕಾಂಗಿಯಾಗಿ ಕಟ್ಟಿಹಾಕಿದ್ದಾನೆ! ಮದಿಸಿದ ಆನೆಯ ಕಣ್ಣಿಗೆ ಅಂಕುಶ ಹಾಕಿ ಯುದ್ಧ ಗೆದ್ದ ವೈಭವ್ ಸೂರ್ಯವಂಶಿ!ಕ್ರಿಕೆಟ್ ಲೋಕದಲ್ಲಿ ಒಂದು ಪ್ರಸಿದ್ಧ ಕಥೆಯಿದೆ. ಗ್ರೆಗ್ ಥಾಮಸ್ ಎಂಬ ಫಾಸ್ಟ್ ಬೌಲರ್ ಸಾಕ್ಷಾತ್ ವಿವಿಯನ್ ರಿಚರ್ಡ್ಸ್ ವಿರುದ್ಧ ಬೌಲಿಂಗ್ ಮಾಡುತ್ತಿದ್ದರು. ರಿಚರ್ಡ್ಸ್ ಅವರನ್ನು ಹಲವು ಬಾರಿ ಬೀಟ್ ಮಾಡಿದಾಗ ಥಾಮಸ್ ಹೀಗೆ ಪಿಸುಗುಟ್ಟಿದರು-
”ಹೇ ವಿವ್, ಕ್ರಿಕೆಟ್ ಬಾಲ್ ಕೆಂಪು ಬಣ್ಣದಲ್ಲಿದೆ. ಅದು ವೃತ್ತಾಕಾರವಾಗಿದ್ದು, ಐದು ಔನ್ಸ್ ತೂಕ ಹೊಂದಿದೆ. ಈಗ ಅದನ್ನೊಮ್ಮೆ ಆಡಿ ತೋರಿಸಿ…!”
ಥಾಮಸ್ ಎಸೆದ ಮುಂದಿನ ಚೆಂಡು ಮೈದಾನದ ಹೊರಗೆ ಹೋಗಿ ಬಿದ್ದಿತು! ಆಗ ರಿಚರ್ಡ್ಸ್ ಬೌಲರ್ಗೆ ಹೇಳಿದರು-
”ಕ್ರಿಕೆಟ್ ಬಾಲ್ ಹೇಗಿರುತ್ತದೆ ಎಂದು ನಿಮಗೀಗ ಗೊತ್ತಾಯಿತಲ್ಲವೇ. ಇನ್ನು ನೀವು ಹೋಗಿ ಆ ಬಾಲ್ ಎಲ್ಲಿದೆ ಎಂದು ಹುಡುಕಿಕೊಳ್ಳಿ…!”
ಕಮ್ಮಿನ್ಸ್ ಮತ್ತು ವೈಭವ್ ನಡುವಿನ ಹೋರಾಟವನ್ನು ನೋಡಿದಾಗ ಆ ಘಟನೆಯೇ ನೆನಪಿಗೆ ಬಂತು.

ವೈಭವ್ನನ್ನು ಕಟ್ಟಿಹಾಕಲು ತನ್ನ ಬಳಿ ಪ್ಲಾನ್ ಎ, ಪ್ಲಾನ್ ಬಿ ಮತ್ತು ಪ್ಲಾನ್ ಸಿ ಇದೆ ಎಂದು ಪಂದ್ಯ ಆರಂಭವಾಗುವ ಮುನ್ನ ಕಮ್ಮಿನ್ಸ್ ಹೇಳಿದ್ದರು.
ನಿಜ ಹೇಳಬೇಕೆಂದರೆ ಕಮ್ಮಿನ್ಸ್ ಮೂರೂ ಯೋಜನೆಗಳನ್ನು ಪ್ರಯೋಗಿಸಿದ್ದರು. ವೈಭವ್ ವಿರುದ್ಧ ಫುಲ್ ಲೆಂತ್ ಡೆಲಿವರಿ, ಬೌನ್ಸರ್ ಮತ್ತು ಸ್ಲೋ ಬಾಲ್ ಎಲ್ಲವನ್ನೂ ಕಮ್ಮಿನ್ಸ್ ಬಳಸಿದ್ದರು. ಆದರೆ ವೈಭವ್ ಹ್ಯಾಟ್ರಿಕ್ ಸಿಕ್ಸರ್ಗಳನ್ನು ಬಾರಿಸುವ ಮೂಲಕ ಅದಕ್ಕೆ ಉತ್ತರಿಸಿದ!

ಅಲ್ಲಿ ಒಂದು ಅಸಾಧಾರಣ ಫೀಲ್ಡ್ ಸೆಟಪ್ ಕೂಡ ನಾವು ನೋಡಿದೆವು. ಮಿಡ್-ಆಫ್ ಫೀಲ್ಡರ್ ಅತ್ಯಂತ ಸ್ಟ್ರೈಟ್ ಆಗಿ ವೈಭವ್ನನ್ನು ಗುರಿಯಾಗಿಸಿ ನಿಂತಿದ್ದ. ಅವನ ತಲೆಯ ಮೇಲಿಂದಲೇ ವೈಭವ್ ಚೆಂಡನ್ನು ಗ್ಯಾಲರಿಗೆ ಅಟ್ಟಿದ!
ವೈಭವ್ ಕಮ್ಮಿನ್ಸ್ಗೆ ನೇರವಾಗಿಯೇ ಸವಾಲು ಹಾಕುತ್ತಿದ್ದ-
”ನಿಮಗೆ ಮೂರು ಪ್ಲಾನ್ಗಳು ಗೊತ್ತು ತಾನೇ, ಅದನ್ನೆಲ್ಲಾ ಕ್ರೀಡಾಂಗಣದಿಂದ ಹೊರಗೆ ಹೊಡೆದು ಅಟ್ಟಿದ್ದೇನೆ…!!”
ಚೇಸಿಂಗ್ ತಂಡಗಳಿಗೆ ಹೆಚ್ಚು ಬೆಂಬಲ ನೀಡುವ ಮೈದಾನದಲ್ಲಿ ಎಲಿಮಿನೇಟರ್ ಪಂದ್ಯ ನಡೆದಿತ್ತು ಎಂಬುದನ್ನು ನೆನಪಿನಲ್ಲಿಡಬೇಕು. ಆದರೆ ವೈಭವ್ ಅದನ್ನೂ ಮೆಟ್ಟಿ ನಿಂತರು!
ಆದರೆ ಕೇವಲ ಒಂದು ವಿಷಯದಲ್ಲಿ ಮಾತ್ರ ನಿರಾಶೆಯಿದೆ. ಟಿ-20 ಕ್ರಿಕೆಟ್ನ ಅತ್ಯಂತ ವೇಗದ ಶತಕದ ದಾಖಲೆ ಕೈಗೆ ಬಂದರೂ ಬಾಯಿಗೆ ಬಾರದಂತೆ ವೈಭವ್ಗೆ ಕೈತಪ್ಪಿ ಹೋಯಿತು!



