ಜಬಲ್ಪುರ ದೋಣಿ ದುರಂತದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಾಯಿ ಮತ್ತು ಮಗುವಿನ ಭಾವನಾತ್ಮಕ ಫೋಟೋ ಸುಳ್ಳು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಬರ್ಗಿ ಅಣೆಕಟ್ಟಿನ ಬಳಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿತ್ತು. ಆದರೆ ಈ ಚಿತ್ರವು ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನದಿಂದ ಸೃಷ್ಟಿಸಿದ್ದಾ ಗಿರಬಹುದು ಅಥವಾ ಈ ಘಟನೆಗೆ ಯಾವುದೇ ಸಂಬಂಧವಿಲ್ಲದ ಚಿತ್ರವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.



ಇಂತಹ ಸಂಕಷ್ಟದ ಸಮಯದಲ್ಲಿ ದೃಢೀಕರಿಸದ ಮತ್ತು ಭಾವನಾತ್ಮಕ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಬೇಡಿ ಎಂದು ಆಡಳಿತ ಮಂಡಳಿಯು ಜನರಲ್ಲಿ ಮನವಿ ಮಾಡಿದೆ. ಇಂತಹ ತಪ್ಪು ಮಾಹಿತಿಗಳು ರಕ್ಷಣಾ ಕಾರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ. ದುರಂತಗಳ ಸಂದರ್ಭದಲ್ಲಿ ಹರಡುವ ಸುಳ್ಳು ಸುದ್ದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಚರ್ಚೆಗಳು ಈ ಘಟನೆಯಿಂದಾಗಿ ಮುನ್ನೆಲೆಗೆ ಬಂದಿವೆ. ಸಾಕಾರ ನ್ಯೂಸ್ ಕೂಡಾ ರಾಷ್ಟ್ರೀಯ ಮಾಧ್ಯಗಳ ವರದಿ ಆಧರಿಸಿ ಈ ಫೋಟೋವನ್ನು ಬೋಟ್ ದುರಂತದ ವರದಿ ಜತೆ ಪ್ರಕಟಿಸಿತ್ತು.
ಸಾರ್ವ ಜನಿಕರು ಯಾವುದೇ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಮತ್ತು ಇಂದಿನ ಎಐ ಯುಗದಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದೇ ಗೊಂದಲದ ವಿಷಯವಾಗಿದೆ.








