








ಪುತ್ತೂರು: ತಾಲೂಕಿನ ಸಂಪ್ಯದಲ್ಲಿರುವ ಮೆಡ್ ಲ್ಯಾಂಡ್ ಆಸ್ಪತ್ರೆಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ಆಶಾ ಕಾರ್ಯಕರ್ತೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ರಕ್ತದ ಒತ್ತಡ, ಶುಗರ್, ಹಿಮೋಗ್ಲೋಬಿನ್, ತೂಕ ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗಳು ಉಚಿತವಾಗಿ ನೆರವೇರಿಸಲಾಯಿತು. ತಜ್ಞ ವೈದ್ಯರ ತಂಡವು ಭಾಗವಹಿಸಿದವರಿಗೆ ಆರೋಗ್ಯ ಸಂಬಂಧಿತ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೆಡ್ ಲ್ಯಾಂಡ್ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ವಿಶಾಲ್ ಯು ಪಿ ಆಶಾ ಕಾರ್ಯಕರ್ತೆಯರು ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ಸೇವೆಯನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು. ಅವರ ಆರೋಗ್ಯ ಕಾಳಜಿ ಕೂಡ ಅತಿ ಮುಖ್ಯವಾಗಿದ್ದು, ಇಂತಹ ಶಿಬಿರಗಳು ಅವಶ್ಯಕವೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕರಾಗಿರುವ ಶ್ರೀಮತಿ ಹರಿಣಿ ಇಂತಹ ಉಚಿತ ಶಿಬಿರಗಳು ತಮ್ಮ ಆರೋಗ್ಯವನ್ನು ಪರಿಶೀಲಿಸಲು ಸಹಾಯಕವಾಗಿದ್ದು, ಆಸ್ಪತ್ರೆಯ ಈ ಮುಂದಾಳತ್ವಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರುಗಳಾದ ಮಧುಮೇಹ ತಜ್ಞೆ ಡಾ ಸ್ವಾತಿ ಪಿ, ಡಾ ಸುಜನ್, ಆಸ್ಪತ್ರೆಯ ಪಿ ಆರ್ ಓ ರಝಕ್ ಸಾಲ್ಮರ ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.ರಫೀಕ್ ಎಂ ಎ ಸವನೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

