ಅವಿವಾಹಿತ ಮಗಳು ಗರ್ಭಿಣಿಯಾದ ಬಳಿಕ ಮಾನಹಾನಿಯ ಭಯದಿಂದ 18 ವರ್ಷದ ಯುವತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ತಂದೆ ಮತ್ತು ಆತನ ಸಂಬಂಧಿಯನ್ನು ಬಂಧಿಸಲಾಗಿದೆ. ದೆಹಲಿಯ ಟಿಗ್ರಿ ಮೂಲದ ಲಖ್ಪತ್ ಸಿಂಗ್ (52) ಎಂಬಾತ ಹಾಗೂ ಆತನ ನಿಕಟ ಸಂಬಂಧಿ ಈ ಕ್ರೂರ ಕೊಲೆ ಪ್ರಕರಣದಲ್ಲಿ ಸದ್ಯ ಪೊಲೀಸರ ವಶದಲ್ಲಿದ್ದಾರೆ.
ತನ್ನ 18 ವರ್ಷದ ಮಗಳು ಅವಿವಾಹಿತೆಯಾಗಿದ್ದರೂ ಗರ್ಭಿಣಿಯಾಗಿದ್ದಾಳೆ ಎಂಬ ವಿಷಯ ತಿಳಿದ ಲಖ್ಪತ್ ಸಿಂಗ್, ಕುಟುಂಬಕ್ಕೆ ಉಂಟಾಗಬಹುದಾದ ಮಾನಹಾನಿಯ ಭಯದಿಂದ ಆಕೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದನು. ಯುವತಿಯ ಗರ್ಭಧಾರಣೆಯ ವಿಷಯ ಹೊರಬಿದ್ದರೆ ಸಮಾಜದಲ್ಲಿ ದೊಡ್ಡ ಮಟ್ಟದ ನಾಲಸೆಯಾಗುತ್ತದೆ ಎಂಬ ಆಲೋಚನೆಯೇ ತಂದೆ ಮತ್ತು ಸಂಬಂಧಿಯನ್ನು ಈ ಕ್ರೂರ ಕೃತ್ಯಕ್ಕೆ ಪ್ರೇರೇಪಿಸಿತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.


ಕೊಲೆಯನ್ನು ಕಾರ್ಯಗತಗೊಳಿಸಲು ಲಖ್ಪತ್ ಸಿಂಗ್ ನಿಖರವಾದ ಯೋಜನೆ ರೂಪಿಸಿ, ಉತ್ತಮ ಚಿಕಿತ್ಸೆ ಕೊಡಿಸುವುದಾಗಿ ಸುಳ್ಳು ಹೇಳಿ ಮಗಳನ್ನು ದೆಹಲಿಯಿಂದ ಉತ್ತರ ಪ್ರದೇಶದ ಆಗ್ರಾದಲ್ಲಿದ್ದ ತನ್ನ ಸ್ವಂತ ಊರಿಗೆ ಕರೆದೊಯ್ದಿದ್ದನು. ತರುವಾಯ, ಜುಲೈ 29 ರಂದು ಲಖ್ಪತ್ ಸಿಂಗ್ ಮತ್ತು ಆತನ ಸಂಬಂಧಿ ಸೇರಿ 18 ವರ್ಷದ ಯುವತಿಯನ್ನು ತಂತ್ರದಿಂದ ಆಗ್ರಾದ ಪ್ರಸಿದ್ಧ ಚಂಬಲ್ ನದಿಯ ದಂಡೆಗೆ ಕರೆದೊಯ್ದರು.
ಅಲ್ಲಿ ಮುಂಚಿತವಾಗಿಯೇ ಯೋಜಿಸಿದಂತೆ ಇಬ್ಬರೂ ಸೇರಿ ಯುವತಿಯನ್ನು ಕ್ರೂರವಾಗಿ ಚಂಬಲ್ ನದಿಯ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ರೀತಿಯಲ್ಲಿ, ಯುವತಿಯನ್ನು ನದಿಯಲ್ಲಿ ಮುಳುಗಿಸಿ ಕೊಲ್ಲುವ ಭೀಕರ ದೃಶ್ಯಗಳು ಮತ್ತು ಚಿತ್ರಗಳನ್ನು ಆರೋಪಿಗಳು ತಮ್ಮ ಮೊಬೈಲ್ ಫೋನ್ನಲ್ಲಿ ಸೆರೆಹಿಡಿದಿರುವುದು ತನಿಖಾ ತಂಡಕ್ಕೆ ತಿಳಿದುಬಂದಿದೆ.
ಯುವತಿಯ ಸಾವು ಖಚಿತವಾದ ನಂತರ, ಆರೋಪಿಗಳು ಶವವನ್ನು ವೇಗವಾಗಿ ಹರಿಯುವ ಚಂಬಲ್ ನದಿಯಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮಗಳ ಕೊಲೆಯ ನಂತರ ಯಾವುದೇ ಪಶ್ಚಾತ್ತಾಪವಿಲ್ಲದೆ ದೆಹಲಿಗೆ ಮರಳಿದ ಲಖ್ಪತ್ ಸಿಂಗ್, ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿ ಪ್ರಕರಣದ ಹಾದಿ ತಪ್ಪಿಸಲು ಯತ್ನಿಸಿದ್ದನು. ಆದರೆ ಪೊಲೀಸರ ಸುದೀರ್ಘ ತನಿಖೆಯ ವೇಳೆ ತಂದೆ ಲಖ್ಪತ್ ಸಿಂಗ್ ನೀಡಿದ ಹೇಳಿಕೆಗಳಲ್ಲಿದ್ದ ವೈರುಧ್ಯ ಮತ್ತು ಆತನ ನಡವಳಿಕೆಯ ಮೇಲಿನ ಅನುಮಾನ ಪೊಲೀಸರ ಗಮನಕ್ಕೆ ಬಂದು, ಆತನನ್ನು ವಿಚಾರಣೆಗೆ ಒಳಪಡಿಸಲಾಯಿತು.





