ಸುಳ್ಯದ ಒಡಬಾಯಿಯಲ್ಲಿ ಜುಲೈ 31 ರಂದು ರಾತ್ರಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಲವಕುಮಾರ್ ಬಾರೆತಡ್ಕ (೨೮ ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
ಅಪಘಾತದ ಬಳಿಕ ಗಾಯಗೊಂಡಿದ್ದ ಲವಕುಮಾರ್ ಅವರನ್ನು ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕಾಶ್ ಅವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಲೈಫ್ ಕೇರ್ ಆಂಬುಲನ್ಸ್ ಮೂಲಕ ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಆಗಸ್ಟ್ 1 ರಂದು ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.
ಅಪಘಾತಕ್ಕೀಡಾದ ಕಾರನ್ನು ಐವರ್ನಾಡು ಗ್ರಾಮದ ಚಿಮ್ಯೂರು ನಿವಾಸಿ ಕುಸುಮಾಧರ ಎಂಬವರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೃತ ಲವಕುಮಾರ್ ಅವರು ತಂದೆ ಶೇಷಪ್ಪ ಗೌಡ, ತಾಯಿ ಶಿವಮ್ಮ ಹಾಗೂ ಸಹೋದರ ಯಶ್ವಂತ್ ಅವರನ್ನು ಅಗಲಿದ್ದಾರೆ.










