ಇವತ್ತಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವವೊಂದು ಎದುರಾಯಿತು. ಬಹುಶಃ ಪ್ರತಿಯೊಬ್ಬರ ಬದುಕಿಗೂ ಇಂತಹ ಅನುಭವ ಸಿಗುವುದಿಲ್ಲ. ವಯನಾಡಿನ ಭೂಕುಸಿತ ದುರಂತದ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ನನಗೆ ದೊರಕಿತ್ತು. ಆ ದಿನ ಕಂಡ ದೃಶ್ಯಗಳು ಇಂದಿಗೂ ಮನಸ್ಸಿನಲ್ಲಿ ಅಚ್ಚೊತ್ತಿದಂತಿವೆ.
ದುರಂತ ನಡೆದ ದಿನ ಮಧ್ಯಾಹ್ನ ನಾವು ಆರು ಜನರ ತಂಡವಾಗಿ ವಯನಾಡಿನತ್ತ ಹೊರಟೆವು. ಸಂಜೆ ವೇಳೆಗೆ ಮೇಪಾಡಿ ತಲುಪಿದೆವು. ದುರಂತ ಸಂಭವಿಸಿದ ಮುಂಡಕೈ–ಚೂರಲ್ಮಲೆ ಪ್ರದೇಶದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಮೇಪಾಡಿಯ ಸರ್ಕಾರಿ ಆಸ್ಪತ್ರೆ, ಅಬ್ದುಲ್ ಕಲಾಂ ಸಮುದಾಯ ಭವನ ಹಾಗೂ ಸುತ್ತಮುತ್ತಲಿನ ಕಾಲೇಜುಗಳಲ್ಲಿ ತಾತ್ಕಾಲಿಕ ಶವಾಗಾರಗಳು ಮತ್ತು ನಿರಾಶ್ರಿತರ ಶಿಬಿರಗಳನ್ನು ಸ್ಥಾಪಿಸಲಾಗಿತ್ತು.
ಆ ರಾತ್ರಿ ರಕ್ಷಣಾ ಕಾರ್ಯ ಸ್ಥಗಿತಗೊಂಡಿದ್ದರಿಂದ ಅಲ್ಲೇ ಉಳಿಯಬೇಕಾಯಿತು. ರೆಸ್ಕ್ಯೂ ತಂಡದೊಂದಿಗೆ ಇದ್ದ ಕಾರಣ ಆಂಬುಲೆನ್ಸ್ಗಳಲ್ಲಿ ಬರುತ್ತಿದ್ದ ಮೃತದೇಹಗಳನ್ನು ಇಳಿಸಿ ವಿಶೇಷ ಫ್ರೀಜರ್ಗಳಲ್ಲಿ ಇರಿಸುವ ಕೆಲಸದಲ್ಲಿ ನಾವೂ ಕೈಜೋಡಿಸಿದೆವು.
ನಾವು ತಲುಪುವಷ್ಟರಲ್ಲಿ 91 ಮೃತದೇಹಗಳು ಪತ್ತೆಯಾಗಿದ್ದವು. ಆದರೆ ಆಂಬುಲೆನ್ಸ್ಗಳು ಇನ್ನೂ ಬರುತ್ತಲೇ ಇದ್ದವು. ತಮ್ಮ ಬಂಧುಗಳ ಫೋಟೋ ಹಿಡಿದು “ಇವರು ಇಲ್ಲಿ ಇದ್ದಾರೆಯೇ?” ಎಂದು ಕೇಳುತ್ತಾ ಅಲೆದಾಡುತ್ತಿದ್ದವರನ್ನು ನೋಡಿದಾಗ ಮನಸ್ಸು ಕರಗುತ್ತಿತ್ತು.
ಒಬ್ಬ ತಂದೆ ತನ್ನ ಮಗಳ ಫೋಟೋ ತೋರಿಸಿದಾಗ, ಶವಾಗಾರದಲ್ಲಿದ್ದ ಒಂದು ಮೃತದೇಹವನ್ನು ತೋರಿಸಲು ಕರೆದುಕೊಂಡು ಹೋದೆ. ಬಿಳಿ ಬಟ್ಟೆ ತೆರೆದು ನೋಡಿದಾಗ ಆ ಮೃತದೇಹದ ಮುಖವೇ ಇರಲಿಲ್ಲ. ಇನ್ನೊಂದು ಫ್ರೀಜರ್ನಲ್ಲಿ ದೇಹದ ಭಾಗಗಳು ಮಾತ್ರ ಇದ್ದವು. ತಲೆ ಇದ್ದರೆ ದೇಹವಿಲ್ಲ, ದೇಹ ಇದ್ದರೆ ತಲೆಯಿಲ್ಲ. ಅಂತಹ ದೃಶ್ಯಗಳನ್ನು ಕಂಡ ನಂತರ ಅಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ.

ನಂತರ ನಿರಾಶ್ರಿತರ ಶಿಬಿರದತ್ತ ಹೋದೆವು. ಅಲ್ಲಿ ಮತ್ತೊಂದು ನೋವಿನ ಲೋಕವೇ ಕಾಣಿಸಿತು. ಕೆಲವರು ಗೋಡೆಯನ್ನು ನೋಡುತ್ತಾ ಮೌನವಾಗಿ ಕುಳಿತಿದ್ದರು. ಕೆಲವರು ಊಟದ ತಟ್ಟೆ ಮುಂದೆ ಇಟ್ಟುಕೊಂಡೇ ತಿನ್ನದೆ ಕುಳಿತಿದ್ದರು. ಸಣ್ಣ ಮಕ್ಕಳ ಅಳುವಿನ ಜೊತೆ ದೊಡ್ಡವರ ಆಕ್ರಂದನವೂ ಕೇಳಿಸುತ್ತಿತ್ತು.
ಗೋಡೆಗೆ ಮುಖಕೊಟ್ಟು ಅಳುತ್ತಿದ್ದ ಬಾಲಕನೊಬ್ಬ ತನ್ನ ತಂದೆಯ ಮೃತದೇಹ ನೋಡಿ ಬಂದಿದ್ದ. “ಎಲ್ಲಾಮ್ ಪೋಯಿ ಮೋನೇ…” ಎಂದು ಅಳುತ್ತಾ ಅವನ ಕೈ ಹಿಡಿದಿದ್ದ ತಾಯಿಯ ಸ್ಪರ್ಶ ಇಂದಿಗೂ ಮರೆತಿಲ್ಲ.
ಇನ್ನೊಬ್ಬ ಹದಿಹರೆಯದ ಹುಡುಗ ತನ್ನ ಕೈಯಲ್ಲಿ ಪುಟ್ಟ ಮಗುವನ್ನು ಹಿಡಿದು ನಿಂತಿದ್ದ. “ಹಲವರು ನನ್ನ ಕೈ ಹಿಡಿದು ರಕ್ಷಿಸಿ ಎಂದು ಕೂಗುತ್ತಿದ್ದರು. ಆದರೆ ನನ್ನ ಕೈಗೆ ಸಿಕ್ಕಿದ್ದು ಈ ಮಗು ಮಾತ್ರ. ಉಳಿದವರನ್ನು ಉಳಿಸಲಾಗಲಿಲ್ಲ” ಎಂದು ಅಳುತ್ತಿದ್ದ ಅವನ ನೋವು ಮನಸ್ಸನ್ನು ಕಲುಕಿತ್ತು.
ಆ ರಾತ್ರಿ ಪಕ್ಕದ ಮಸೀದಿಯಲ್ಲಿ ವಿಶ್ರಾಂತಿ ಪಡೆದು ಮರುದಿನ ಬೆಳಿಗ್ಗೆ ದುರಂತ ಸ್ಥಳಕ್ಕೆ ಹೊರಟೆವು. ಖಾಸಗಿ ವಾಹನಗಳಿಗೆ ಪ್ರವೇಶ ಇರಲಿಲ್ಲ. ಕೊನೆಗೆ ಎಸ್ವೈಎಸ್ ಸಾಂತ್ವನ ತಂಡದ ಆಂಬುಲೆನ್ಸ್ನಲ್ಲಿ ಚೂರಲ್ಮಲೆ ತಲುಪಿದೆವು.






