ಕಲ್ಲುಗುಂಡಿ: ಸ್ಥಳೀಯ ಪ್ರದೇಶದಲ್ಲಿ ಸಂಭವಿಸಿದ ವಿವಾಹಿತ ಮಹಿಳೆಯ ಅಸಹಜ ಸಾವಿನ ಘಟನೆಗೆ ಕಲ್ಲುಗುಂಡಿ ಮುಹ್ಯದ್ದೀನ್ ಜುಮಾ ಮಸೀದಿ ಸಮಿತಿಯು ತೀವ್ರ ಸಂತಾಪ ಹಾಗೂ ಖಂಡನೆ ವ್ಯಕ್ತಪಡಿಸಿದ್ದು, ಪ್ರಕರಣದ ಕುರಿತು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮಸೀದಿ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, “ಈ ದುರಂತ ಘಟನೆಯು ಅತ್ಯಂತ ದುಃಖಕರ ಹಾಗೂ ನೋವುಂಟುಮಾಡುವ ಸಂಗತಿಯಾಗಿದೆ. ಘಟನೆಯ ಕುರಿತು ನಮ್ಮ ಜಮಾಅತ್ ಸದಸ್ಯರು ತೀವ್ರ ಶೋಕ ವ್ಯಕ್ತಪಡಿಸುತ್ತಿದ್ದು, ಮೃತರ ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಮತ್ತು ಧೈರ್ಯವನ್ನು ಅಲ್ಲಾಹನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ,” ಎಂದು ತಿಳಿಸಿದ್ದಾರೆ.
ಸದರಿ ಅಸಹಜ ಸಾವಿನ ಪ್ರಕರಣದ ಕುರಿತು ಸಂಬಂಧಪಟ್ಟ ಪೊಲೀಸ್ ಹಾಗೂ ಆಡಳಿತಾಧಿಕಾರಿಗಳು ಯಾವುದೇ ರೀತಿಯ ಬಾಹ್ಯ ಒತ್ತಡಗಳಿಗೆ ಮಣಿಯದೆ ಅಥವಾ ಪಕ್ಷಪಾತ ಮಾಡದೆ, ಅತ್ಯಂತ ನ್ಯಾಯಸಮ್ಮತ ಹಾಗೂ ಪಾರದರ್ಶಕ ರೀತಿಯಲ್ಲಿ ಸಮಗ್ರ ತನಿಖೆ ನಡೆಸಬೇಕು. ಘಟನೆಯ ಹಿಂದಿರುವ ಸತ್ಯಾಸತ್ಯತೆಗಳನ್ನು ಶೀಘ್ರವಾಗಿ ಸಾರ್ವಜನಿಕವಾಗಿ ಬಹಿರಂಗಪಡಿಸಿ ಸೂಕ್ತ ನ್ಯಾಯ ಒದಗಿಸಬೇಕೆಂದು ಮುಹ್ಯದ್ದೀನ್ ಜುಮಾ ಮಸೀದಿ ಸಮಿತಿಯು ಪ್ರಕಟಣೆಯಲ್ಲಿ ಬಲವಾಗಿ ಆಗ್ರಹಿಸಿದೆ.





