ತುಮಕೂರು: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನಾಜಿಯಾ ಇಲಾಹಿ ಖಾನ್ ಎಂಬ ಮಹಿಳೆ ಸಂದರ್ಶನವೊಂದರಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಮಜೀದ್ ಇ ಅಲ್ಲಾ ನೇತೃತ್ವದಲ್ಲಿ ನೂರಾರು ಮುಸ್ಲಿಮರು ತುಮಕೂರಿನ ಗುಂಚಿ ಸರ್ಕಲ್ನಲ್ಲಿರುವ ಮಸೀದಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆಯ ಮೂಲಕ ತೆರಳಿ ಶನಿವಾರ ಪ್ರತಿಭಟನೆ ನಡೆಸಿದರು.
ಅವಹೇಳನಕಾರಿಯಾಗಿ ಮಾತನಾಡಿದ ನಾಜಿಯಾ ಇಲಾಹಿ ಖಾನ್ ಅವರನ್ನು ತಕ್ಷಣ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನಾಕಾರರು ಆಕೆಯ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಮುಸ್ಲಿಂ ಜಮಾ ಆತ್ನ ತುಮಕೂರು ಉಸ್ತುವಾರಿ ಅಬ್ದುರ್ ರೆಹಮಾನ್ ಮೊಗರ್ಪಣೆ ಮಾತನಾಡಿ, ದೇವದೂತರಾದ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ನಾಜಿಯಾ ಇಲಾಹಿ ಖಾನ್ ಹೇಳಿಕೆಯನ್ನು ಖಂಡಿಸಿದರು.
ಮಜೀದ್ ಇ ಅಲ್ಲಾ ನ ಕಾರ್ಯದರ್ಶಿ ಫಯಾಜ್ ಖಾನ್ ಮಾತನಾಡಿದರು. ವಕ್ಫ್ ಸಮಿತಿ ಮಾಜಿ ಉಪಾಧ್ಯಕ್ಷ ಮೌಲಾನಾ ಆರೀಫ್ ರಾಜಾ, ರಿಜ್ವಾನ್ ಪಾಷ ಜುನೇದಿ, ಅಬ್ರಹಾರ್ ಖಾದ್ರಿ ಹಾಗೂ ಸನ್ನತ್ ಸ್ಟೂಡೆಂಟ್ ಆರ್ಗನೈಜೇಷನ್ನ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.

