ಕೇರಳದ ಕಣ್ಣೂರು ಜಿಲ್ಲೆಯ ಇರಿಟ್ಟಿ ಸಮೀಪದ ವಳ್ಳಿತ್ತೋಡ್ನ ಪ್ರಖ್ಯಾತ ಆಧ್ಯಾತ್ಮಿಕ ಗುರುಗಳು, ಮಹಾನ್ ಪಂಡಿತರೂ ಹಾಗೂ ಸೂಫೀವರ್ಯರೂ ಆದ ವಳ್ಳಿತ್ತೋಡ್ ಉಪ್ಪಾಪ ಅವರು ಇಂದು ವಫಾತ್ (ವಿಧಿವಶ) ಆಗಿದ್ದಾರೆ.
ಅವರ ನಿಧನದಿಂದಾಗಿ ಮಲಬಾರ್ ಕರಾವಳಿ ಮತ್ತು ಮಲೆನಾಡು ಭಾಗದ ಸಾವಿರಾರು ಅಭಿಮಾನಿಗಳು ಹಾಗೂ ಆಧ್ಯಾತ್ಮಿಕ ವಲಯ ತೀವ್ರ ಶೋಕದಲ್ಲಿ ಮುಳುಗಿದೆ.ವಳ್ಳಿತ್ತೋಡ್ ಉಪ್ಪಾಪ ಅವರು ಕೇವಲ ಒಬ್ಬ ಧಾರ್ಮಿಕ ಪಂಡಿತರಾಗಿರದೆ, ತಮ್ಮ ಸಾತ್ವಿಕ ಜೀವನ ಮತ್ತು ಸರಳತೆಯಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.
ಅಸಂಖ್ಯಾತ ಭಕ್ತರ ಕಷ್ಟ-ಕಾರ್ಪಣ್ಯಗಳಿಗೆ ತಮ್ಮ ಆಧ್ಯಾತ್ಮಿಕ ಶಕ್ತಿಯ ಮೂಲಕ ಸಾಂತ್ವನ ನೀಡುತ್ತಿದ್ದ ಅವರು, ಅನೇಕ ಅದ್ಭುತಗಳ ಪವಾಡ ಪುರುಷರೆಂದೇ ಜನಮಾನಸದಲ್ಲಿ ಪ್ರಸಿದ್ಧರಾಗಿದ್ದರು. ಜಾತಿ-ಮತ ಭೇದವಿಲ್ಲದೆ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುತ್ತಾ ಬಂದಿದ್ದ ಇವರ ಸನ್ನಿಧಿಗೆ ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುತ್ತಿದ್ದರು.
“ಪಂಡಿತರೂ ಸಾತ್ವಿಕರೂ ಸೂಫೀವರ್ಯರೂ ಆದ ಈ ಮಹಾನುಭಾವರನ್ನು ನೇರವಾಗಿ ಕಂಡು, ಅವರ ದರ್ಶನ ಪಡೆಯುವ ಭಾಗ್ಯ ಲಭಿಸಿದ್ದು ನನ್ನ ಪಾಲಿಗೆ ಅತ್ಯಂತ ಧನ್ಯತೆಯ ಮತ್ತು ಆತ್ಮೀಯ ಸಂತ್ರಪ್ತಿಯನ್ನು ವೃದ್ಧಿಸಿಕೊಟ್ಟ ಕ್ಷಣಗಳಾಗಿವೆ. ಅವರ ಭೌತಿಕ ಅಗಲಿಕೆ ತುಂಬಲಾರದ ನಷ್ಟವಾಗಿದೆ,” ಎಂದು ಅವರ ನಿಕಟವರ್ತಿಗಳು ಹಾಗೂ ಭಕ್ತರು ಕಣ್ಣೀರಿನಿಂದ ಸ್ಮರಿಸಿದ್ದಾರೆ.




