ಟಾಟಾ ಬಾಯ್ಬಾಯ್..ಸಲೀಮ್ ಕುಮಾರ್!

ಬಹುಷಃ ಪುಲಿವಾಲ್ ಕಲ್ಯಾಣಮ್ ಚಿತ್ರದ ಮೇಲಿನ  ಇದೊಂದೇ ಚಿತ್ರ ಸಾಕು. 90 ಕಿಡ್ಸ್ ನಕ್ಕು ಹಗುರಾಗಲು, ತಮ್ಮ  ಸುಂದರ ಬಾಲ್ಯದ ಕಡೆಗೆ ಸಾಗಲು. ಪುಲಿವಾಲ್ ಕಲ್ಯಾಣಮ್ ಚಿತ್ರದಲ್ಲಿ ಮುಂಬಯಿಯಿಂದ ಟ್ಯಾಕ್ಸಿ ಹಿಡಿದು ಬರುವ ಸಲೀಮ್ ಕುಮಾರ್ ಪಾತ್ರ ಆ ಸಿನಿಮಾದಲ್ಲಿ ಸೃಷ್ಟಿಸಿದ  ಸಂಚಲನ ಸಣ್ಣದಲ್ಲ.

ಕೇರಳದ ಪರವೂರಿನಲ್ಲಿ  1969 ರಲ್ಲಿ ಸಲೀಂ ಕುಮಾರ್ ಅವರ ಜನನವಾಯಿತು. ತಮ್ಮ 57 ವರ್ಷಗಳ ಜೀವನದಲ್ಲಿ ಕಷ್ಟಗಳ ವಿರುದ್ಧ ಹೋರಾಡುತ್ತಲೇ, ಅಭಿನಯದ ಮೇಲಿನ ತೀವ್ರ ಆಸಕ್ತಿಯಿಂದಾಗಿ, ಮೆಗಾ ಸ್ಟಾರ್‌ಗಳಾದ ಮಮ್ಮುಟ್ಟಿ, ಮೋಹನ್‌ಲಾಲ್, ತಿಲಕನ್, ನೆಡುಮುಡಿ ವೇಣು ಮುಂತಾದವರು ಆಳುತ್ತಿದ್ದ ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯನ್ನು ಸೃಷ್ಟಿಸಿಕೊಂಡರು.

ನಂತರದ ದಿನಗಳಲ್ಲಿ ಗಂಭೀರ ಪಾತ್ರಗಳ ಮೂಲಕ ಭಾರತೀಯ ಚಿತ್ರರಂಗದ ನಂಬರ್ ಒನ್ ನಟನಾಗಿ  ಹೆಮ್ಮೆಯ ಸಲೀಂ ಕುಮಾರ್ ಬೆಳೆದರು.

ಎಂ. ಜಿ. ವಿಶ್ವವಿದ್ಯಾಲಯದ ಮಿಮಿಕ್ರಿ ಸ್ಪರ್ಧೆಯಲ್ಲಿ ಸತತ ಮೂರು ಬಾರಿ ಪ್ರಥಮ ಸ್ಥಾನ ಪಡೆದರು. ಆ ಮಿಮಿಕ್ರಿಯ ಕಲೆಯ ಮೂಲಕವೇ ಅವರು ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟರು. ಏಷ್ಯಾನೆಟ್‌ನ ಕಾಮೆಡಿ ಕಾರ್ಯಕ್ರಮದ ಮೂಲಕ ಅವರ ರಂಗಪ್ರವೇಶವಾಯಿತು.

ನಂತರ 1997 ರಲ್ಲಿ ಸಿದ್ದಿಕ್ ಶಮೀರ್ ನಿರ್ದೇಶನದ ಇಷ್ಟಮಾನು ನೂರು ವಟ್ಟಂ ಸಿನಿಮಾದ ಭಾಗವಾದರು. ತದನಂತರ ಸಿಬಿ ಮಲಯಿಲ್ ನಿರ್ದೇಶನದ, ದಿಲೀಪ್ ನಟನೆಯ ನೀ ವರುವೋಲಂ ಚಿತ್ರದಲ್ಲಿ ಗಮನಾರ್ಹ ಪಾತ್ರವೊಂದು ಅವರಿಗೆ ಸಿಕ್ಕಿತು.

2000 ದಲ್ಲಿ ಬಿಡುಗಡೆಯಾದ ಸತ್ಯಮೇವ ಜಯತೇ ಸಿನಿಮಾದಲ್ಲಿನ ಅವರ ನಟನೆಯನ್ನು ನೋಡಿ, ರಫಿ-ಮೆಕಾರ್ಟಿನ್ ಜೋಡಿಯು ತೆಂಕಾಸಿಪ್ಪಟ್ಟಣಂ ಚಿತ್ರಕ್ಕೆ ಸಲೀಂ ಅವರನ್ನು ಆಯ್ಕೆ ಮಾಡಿತು. ಇದು ಕನ್ನಡಕ್ಕೆ ರವಿಚಂದ್ರನ್ ಶಿವರಾಜ್ ಕುಮಾರ್ ಜೋಡಿಯ ಚಿತ್ರವಾಗಿ ಕೋದಂಡರಾಮ ಎಂಬ ಹೆಸರಿನಲ್ಲಿ ರಿಮೇಕ್ ಕೂಡಾ ಆಗಿತ್ತು. ಇದರಲ್ಲಿನ ಮುತ್ತುರಾಮನ್ ಎಂಬ ಪಾತ್ರ ಸಲೀಂ ಅವರ ವೃತ್ತಿಜೀವನದ ದಿಕ್ಕನ್ನೇ ಬದಲಾಯಿಸಿತು.

ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಜೋಡಿಯ ಜೊತೆ ಸೇರಿ ಪರಕ್ಕುಂ ತಳಿಕ ಕನ್ನಡದಲಿ ನಂತರ ಇದು ಡಕೋಟಾ ಎಕ್ಸ್ಪ್ರೆಸ್ ಆಯಿತು, ಮೀಶಾ ಮಾಧವನ್, ಸಿಐಡಿ ಮೂಸಾ, ತಿಳಕ್ಕಂ ಮುಂತಾದ ಸಿನಿಮಾಗಳ ಮೂಲಕ ಮಲಯಾಳಂ ಪ್ರೇಕ್ಷಕರಿಗೆ ನಗುವಿನ ಹಬ್ಬವನ್ನು ಉಣಬಡಿಸಿದರು.

ದಿಲೀಪ್ ಸಿನಿಮಾಗಳ ಹಾಸ್ಯದ ಯಶಸ್ಸು ಸಲೀಂ ಕುಮಾರ್ ಅವರ ಕೈಯಲ್ಲಿ ಸುರಕ್ಷಿತವಾಗಿತ್ತು ಎಂಬುದಕ್ಕೆ ಮಳತುಳ್ಳಿ ಕಿಲುಕ್ಕಂ, ಕಲ್ಯಾಣರಾಮನ್ (ಪ್ಯಾರಿ), ಪರಕ್ಕುಂ ತಳಿಕ, ತಿಳಕ್ಕಂ ಮುಂತಾದ ಸಿನಿಮಾಗಳೇ ಸಾಕ್ಷಿ.

ಇತರ ಪ್ರಮುಖ ನಟರ ಜೊತೆ ನಟಿಸುವಾಗಲೂ ತಮ್ಮದೇ ಆದ ಛಾಪು ಮೂಡಿಸಲು ಅವರಿಗೆ ಸಾಧ್ಯವಾಯಿತು. ಪೃಥ್ವಿರಾಜ್ ಜೊತೆಗಿನ ಚಾಕೊಲೇಟ್ ಮತ್ತು ಮಮ್ಮುಟ್ಟಿ ಜೊತೆಗಿನ ಶಾಫಿ ನಿರ್ದೇಶನದ ಮಾಯಾವಿ ಇದಕ್ಕೆ ಅತ್ಯುತ್ತಮ ಉದಾಹರಣೆಗಳು. ಮಾಯಾವಿ ಚಿತ್ರದಲ್ಲಿ ಮಮ್ಮುಟ್ಟಿಗಿಂತಲೂ ಹೆಚ್ಚು ಸ್ಕೋರ್ ಮಾಡಿದ್ದು ಸಲೀಂ ಕುಮಾರ್ ಅವರ ಆಶಾನ್ ಎಂಬ ಕಾಮಿಡಿ ಪಾತ್ರ ಎನ್ನಬಹುದು. ಆ ಸೀನ್‌ಗಳನ್ನು ನೋಡಿ ನಗದವರೇ ಇಲ್ಲ.

ಚದಿಕ್ಕಾತ್ತ ಚಂದು ಚಿತ್ರದ ಡ್ಯಾನ್ಸ್ ಮಾಸ್ಟರ್ ವಿಕ್ರಮ್, ಬಾಂಬು ಬಾಯ್ಸ್ ಸಿನಿಮಾದಲ್ಲಿ ಕಲಾಭವನ್ ಮಣಿ ಮತ್ತು ಕೊಚ್ಚಿನ್ ಹನೀಫಾ ಅವರೊಂದಿಗೆ ನಟಿಸಿದ ಆದಿವಾಸಿ ಯುವಕನ ಪಾತ್ರ ಹಾಗೂ ಕಥಾ ಪರಯುಂಪೋಳ್ ಚಿತ್ರದ ಕಥೆಗಾರ ದಾಸ್ ವಡಕ್ಕೇಮುರಿ ಇವೆಲ್ಲವೂ ಪ್ರೇಕ್ಷಕರನ್ನು ಅಪಾರವಾಗಿ ನಗಿಸಿದ ಪಾತ್ರಗಳಾಗಿವೆ.

ಪ್ರೇಕ್ಷಕರನ್ನು ನಗಿಸುವುದರ ಜೊತೆಗೆ, ಯೋಚಿಸುವಂತೆ ಮಾಡುವ ಹಲವು ಗಂಭೀರ ಪಾತ್ರಗಳಿಗೂ ಸಲೀಂ ಕುಮಾರ್ ಜೀವ ತುಂಬಿದ್ದಾರೆ. ಲಾಲ್ ಜೋಸ್ ನಿರ್ದೇಶನದ ಅಚ್ಚನುರಂಗಾತ್ತ ವೀಡು ಸಿನಿಮಾದಲ್ಲಿ ಸಲೀಂ ಕುಮಾರ್ ಅವರ ಮತ್ತೊಂದು ಮುಖವನ್ನು ಮಲಯಾಳಂ ಪ್ರೇಕ್ಷಕರು ಕಂಡರು. ಕಾಮಿಡಿಯಿಂದ ಸಂಪೂರ್ಣ ಭಿನ್ನವಾಗಿ, ಅತ್ಯಂತ ಗಂಭೀರ ಕಥಾಹಂದರ ಹೊಂದಿದ್ದ ಈ ಚಿತ್ರ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು. ಇದರಲ್ಲಿನ ಶ್ಯಾಮುವೆಲ್ ಪಾತ್ರಕ್ಕೆ 2005 ರ ಕೇರಳ ರಾಜ್ಯದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು.

ನಂತರ 2010 ರಲ್ಲಿ ಬಿಡುಗಡೆಯಾದ, ಸಲೀಂ ಅಹಮದ್ ನಿರ್ದೇಶನದ ಆದಾಮಿಂತೆ ಮಗನ್ ಅಬು ಚಿತ್ರದ ನಟನೆಗಾಗಿ ಅವರಿಗೆ ರಾಜ್ಯ ಪ್ರಶಸ್ತಿ ಮಾತ್ರವಲ್ಲದೆ, ಭಾರತ ಸರ್ಕಾರದ ಅತ್ಯುನ್ನತ ರಾಷ್ಟ್ರ ಪ್ರಶಸ್ತಿ (ಅತ್ಯುತ್ತಮ ನಟ) ಒಲಿಯಿತು. 2013 ರಲ್ಲಿ ಅಯಾಳುಂ ಞಾನುಂ ತಮ್ಮಿಲ್ ಚಿತ್ರಕ್ಕಾಗಿ ರಾಜ್ಯದ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ಹಾಗೂ 2016 ರಲ್ಲಿ ಅವರು ನಿರ್ದೇಶಿಸಿದ ಕರುತ್ತ ಜೂತನ್ ಚಿತ್ರದ ಕಥೆಗಾಗಿ ರಾಜ್ಯ ಪ್ರಶಸ್ತಿ ಲಭಿಸಿತು.

ತಮ್ಮ ಜೊತೆ ನಟಿಸಿದ ದಿಗ್ಗಜ ನಟರಿಗೂ ಸಿಗದ ಸುವರ್ಣಾವಕಾಶ ಆದಾಮಿಂತೆ ಮಗನ್ ಅಬು ಚಿತ್ರದ ಮೂಲಕ ಸಲೀಂ ಕುಮಾರ್ ಅವರಿಗೆ ಒದಗಿಬಂತು. ಇದರಲ್ಲಿ ಭಾರತೀಯ ಚಿತ್ರರಂಗದ ಹಿರಿಯ ನಟಿ ಜರೀನಾ ವಹಾಬ್ ಅವರೊಂದಿಗೆ ನಟಿಸಿದ್ದರು. 2018 ರಲ್ಲಿ ಜಯರಾಮ್ ಅವರನ್ನು ಮುಖ್ಯ ಭೂಮಿಕೆಯಲ್ಲಿಟ್ಟುಕೊಂಡು ದೈವಮೇ ಕೈತೊಳಾಂ ಕೆ. ಕುಮಾರಾಕಣಂ ಎಂಬ ಸಿನಿಮಾವನ್ನು ನಿರ್ದೇಶಿಸಿದರು.

ಅಭಿನಯದ ನಡುವೆಯೂ ಅವರು ತಮ್ಮ ರಾಜಕೀಯ ನಿಲುವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಮಹಾ ಪ್ರವಾಹದ ಸಮಯದಲ್ಲಿ, ದೇವರು ನಿಮ್ಮನ್ನು ರಕ್ಷಿಸಿದನೇ ಎಂದು ನಿರೂಪಕರೊಬ್ಬರು ಕೇಳಿದಾಗ, ದೇವರಿಲ್ಲ, ವೈಪಿನ್ ತೀರದಿಂದ ಮಾಜಿ ಸಚಿವ ಶರ್ಮಾ ಅವರು ಕಳುಹಿಸಿದ ಬೋಟ್‌ಗಳು ನನ್ನನ್ನು ಮತ್ತು ನನ್ನ ಕುಟುಂಬವನ್ನು ರಕ್ಷಿಸಿದವು ಎಂದು ಹಾಸ್ಯ ಮಿಶ್ರಿತವಾಗಿ ಉತ್ತರಿಸುವ ಮೂಲಕ ಜೀವನದ ವಾಸ್ತವತೆಯನ್ನು ಎತ್ತಿ ಹಿಡಿದವರು ಸಲೀಂ ಕುಮಾರ್. ತನ್ನ ಫಿಲ್ಟರ್ ಇಲ್ಲದ ನಾಲಗೆ ಮೂಲಕ ಜಗತ್ತಿನ ಕಟು ವಂಚನೆಗಳನ್ನು ತನ್ನ ತಿಳಿಹಾಸ್ಯದ ಮೂಲಕ ಹೇಳಿ ಎಲ್ಲಾ ಧರ್ಮದ ಮೂಲಭೂತವಾದಿಗಳ ಪಾಲಿಗೂ ವಿಲನ್ ಎಂಬಂತೆ ಚಿತ್ರಿತರಾದವರು. ಮನುಷ್ಯ ಹಕ್ಕುಗಳ ಉಲ್ಲಂಘನೆ ಎಂದು ಅಬ್ದುನ್ನಾಸರ್ ಮದನಿ ಪರ ಧ್ವನಿ ಎತ್ತಿದ ಏಕೈಕ ನಟ ಸಲೀಮ್ ಕುಮಾರ್ ಇರಬೇಕು.

ತಮ್ಮ ಅಂತ್ಯಸಂಸ್ಕಾರದ ಸಮಯದಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು ಇರಬಾರದು ಎಂದು ಮುಂಚಿತವಾಗಿಯೇ ಹೇಳಿಟ್ಟಿರುವ  ವ್ಯಕ್ತಿ ಅವರು.
ಮಲಯಾಳಿಗಳ ಮನಸ್ಸನ್ನು ರಂಜಿಸಲು ಹಲವಾರು ಸುಂದರ ಪಾತ್ರಗಳಿಗೆ ಜೀವ ನೀಡಿದ ಪ್ರೀತಿಯ ಸಲೀಂ ಕುಮಾರ್ ಅವರಿಗೆ ಸಾಕಾರ ನ್ಯೂಸ್ ಮೀಡಿಯಾದ ಆದರದ ನಮನಗಳು.

Leave a Reply

Discover more from

Subscribe now to keep reading and get access to the full archive.

Continue reading