ಸುಳ್ಯದ ಪ್ರಮುಖ ಉದ್ಯಮಿ ಕೊಡುಗೈದಾನಿ ಅಬ್ದುಲ್ ಲತೀಫ್ ಹರ್ಲಡ್ಕ ಅವರು ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ, ಅವರ ವತಿಯಿಂದ ಸುಳ್ಯದ ಅನ್ಸಾರಿಯಾ ಯತೀಂಖಾನಾದಲ್ಲಿ ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಕರ್ನಾಟಕ ಮತ್ತು ಕೇರಳದ ಗಣ್ಯ ಉಲಮಾ ಪಂಡಿತರ ಹಾಗೂ ಸಯ್ಯದರ ಉಪಸ್ಥಿತಿಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ನಡೆಯಿತು.


ಕಾರ್ಯಕ್ರಮದಲ್ಲಿ ಸಯ್ಯಿದ್ ಮಸೂದ್ ತಂಙಳ್ ಕೂರತ್, ಸಯ್ಯಿದ್ ಮುಹ್ಸಿನ್ ತಂಙಳ್ ಎಲಿಮಲೆ, ಸಯ್ಯಿದ್ ಜಲಾಲುದ್ದೀನ್ ತಂಙಳ್ ಈಶ್ವರಮಂಗಳ, ಸಯ್ಯಿದ್ ಉಮರ್ ಜಿಫ್ರಿ ತಂಙಳ್ ಕುಂಬಕೋಡು, ಕುಂಞಿಕೋಯ ತಂಙಳ್ ಸ ಅದಿ ಸುಳ್ಯ ಹಾಗೂ ಸಯ್ಯಿದ್ ಅದನಿ ತಂಙಳ್ ಮಿತ್ತೂರು ಸೇರಿದಂತೆ ಹಲವಾರು ಸಾದಾತುಗಳು ಭಾಗವಹಿಸಿ ದುವಾಕ್ಕೆ ನೇತೃತ್ವ ನೀಡಿದರು. ಅಲ್ಲದೆ ಧಾರ್ಮಿಕ ರಂಗದ ಪ್ರಮುಖರಾದ ಮದನಿಯಂ ಅಬ್ದುಲ್ಲತೀಫ್ ಸಖಾಫಿ, ಅಬ್ದುಲ್ ಖಾದರ್ ಮದನಿ ಪಲ್ಲಂಗೋಡು, ಅಬ್ದುಲ್ ಖಾದರ್ ಸಖಾಫಿ ಮುಹಿಮ್ಮಾತ್, ಅಬ್ದುಲ್ ಖಾದರ್ ಸಖಾಫಿ ಮುಧಗುಡ ಮತ್ತು ತೌಸೀಫ್ ಸಅದಿ ಹರೇಕಳ ಸೇರಿದಂತೆ ಅನೇಕ ಉಲಮಾ ನಾಯಕರುಗಳು ಉಪಸ್ಥಿತರಿದ್ದು ಹಜ್ ಯಾತ್ರೆಗೆ ತೆರಳಲಿರುವ ಲತೀಫ್ ಹರ್ಲಡ್ಕ ಅವರಿಗೆ ಶುಭ ಹಾರೈಸಿದರು.
ಈ ಆಧ್ಯಾತ್ಮಿಕ ಮಜ್ಲಿಸ್ನಲ್ಲಿ ಅಬ್ದುಲ್ ಲತೀಫ್ ಹರ್ಲಡ್ಕ ಅವರ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ನೂರಾರು ಸಂಖ್ಯೆಯಲ್ಲಿ ಮುತಅಲ್ಲಿಮರು ಭಾಗವಹಿಸಿದ್ದರು. ಸುಳ್ಯ ಮತ್ತು ಸುತ್ತಮುತ್ತಲಿನ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕ ಭೋಜನ ವ್ಯವಸ್ಥೆ ಇತ್ತು. ಸಮಾಜದ ವಿವಿಧ ಸ್ತರದ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಈ ಭವ್ಯ ಆಧ್ಯಾತ್ಮಿಕ ಮಜ್ಲಿಸ್ ಸಂಪನ್ನಗೊಂಡಿತು.



