ತಮಿಳುನಾಡು ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವುಗಳು ಸಿಗುತ್ತಿದ್ದು, ನಟ ವಿಜಯ್ ಅವರ ಮುಖ್ಯಮಂತ್ರಿ ಪಟ್ಟದ ಕನಸಿಗೆ ಮತ್ತೆ ಅಡ್ಡಿ ಉಂಟಾಗಿದೆ. ಮೇ 9ರ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಬೇಕಿದ್ದ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎನ್ನಲಾಗಿದೆ.

ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಶಾಸಕರ ಬೆಂಬಲದ ಸಹಿ ಸಂಗ್ರಹಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ರಾಜ್ಯಪಾಲರನ್ನು ಮೂರನೇ ಬಾರಿ ಭೇಟಿ ಮಾಡಿದರೂ ವಿಜಯ್ ಅವರಿಗೆ ಬಹುಮತದ ಸಹಿ ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.


ನಿಯಮದ ಪ್ರಕಾರ ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಅಗತ್ಯವಿದ್ದು, ವಿಜಯ್ ಅವರು ರಾಜ್ಯಪಾಲರಿಗೆ ಸಲ್ಲಿಸಿದ ದಾಖಲೆಯಲ್ಲಿ ಕೇವಲ 116 ಶಾಸಕರ ಸಹಿ ಮಾತ್ರ ಇತ್ತು. ಸಂಖ್ಯಾಬಲದ ಕೊರತೆಯ ಕಾರಣದಿಂದಾಗಿ ರಾಜ್ಯಪಾಲರು ಸರ್ಕಾರ ರಚನೆಗೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಪ್ರಮಾಣವಚನ ಕಾರ್ಯಕ್ರಮ ಸದ್ಯಕ್ಕೆ ಸ್ಥಗಿತಗೊಂಡಂತಾಗಿದ್ದು, ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.







