ಆಲೆಟ್ಟಿ: ಗ್ರಾಮದ ವಾರ್ಡ್ ಸಂಖ್ಯೆ 2 ರ ಪೈಂಚ್ಚಾಲು ಪ್ರದೇಶಕ್ಕೆ ಹಲವು ವರ್ಷಗಳಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಕೊನೆಯ ನಿಲುಗಡೆಗೆ ತಲುಪದೆ ಅರ್ಧದಲ್ಲೇ ಹಿಂತಿರುಗುತ್ತಿದ್ದು, ಇದರಿಂದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಈ ಬಸ್ ಸೇವೆಯು ಶಾಲಾ ಮಕ್ಕಳಿಗೆ ಮತ್ತು ಊರಿನ ನಾಗರಿಕರಿಗೆ ಶಾಲೆ, ಆಸ್ಪತ್ರೆ ಹಾಗೂ ಇತರೆ ತುರ್ತು ಅಗತ್ಯಗಳಿಗೆ ಪ್ರಮುಖ ಆಧಾರವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಸ್ ನಿಗದಿತ ನಿಲುಗಡೆಗೆ ಬಾರದೆ ಮಧ್ಯದಲ್ಲೇ ತಿರುಗುತ್ತಿರುವುದರಿಂದ ಪ್ರಯಾಣಿಕರಿಗೆ ಓಡಾಟಕ್ಕೆ ದೊಡ್ಡ ಅಡಚಣೆಯಾಗಿದೆ. ಪ್ರಸ್ತುತ ಪಂಚಾಯತ್ ಆಡಳಿತ ಸಮಿತಿಯ ಅವಧಿ ಮುಗಿದಿದ್ದು, ಗ್ರಾಮದ ಸಂಪೂರ್ಣ ಅಧಿಕಾರ ಪಿಡಿಒ (PDO) ಅವರ ವ್ಯಾಪ್ತಿಯಲ್ಲಿರುವುದರಿಂದ, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಪರವಾಗಿ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರೂ ಈ ತನಕ ಆ ವಿಷಯದಲ್ಲಿ ಯಾವುದೇ ಪ್ರಗತಿ ಕಂಡಿರುವುದಿಲ್ಲ. ಈ ವಿಳಂಬಧೋರಣೆ ವಿರುದ್ಧ ಊರವರು ಆಕ್ರೋಶ ವ್ಯಕ್ತಪಡಿಸಿದ್ದು ಶೀಘ್ರ ಇದಕ್ಕೊಂದು ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.