ಸುಳ್ಯ ನಗರ ಹಾಗೂ ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಿಂದ ಉನ್ನತ ಶಿಕ್ಷಣ ಹಾಗೂ ಇತರೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ಬಡ ಹಾಗೂ ಮಧ್ಯಮ ವರ್ಗದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸೂಕ್ತ ವಸತಿ ಸೌಲಭ್ಯವಿಲ್ಲದೆ ತೀವ್ರ ತೊಂದರೆಯಾಗುತ್ತಿರುವುದನ್ನು ಮನಗಂಡು, ಸುಳ್ಯದಲ್ಲಿ ತುರ್ತಾಗಿ ಮೈನಾರಿಟಿ ಹಾಸ್ಟೆಲ್ ಅಥವಾ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ ಒಂದನ್ನು ಮಂಜೂರು ಮಾಡಿ ಪ್ರಾರಂಭಿಸುವಂತೆ ಸರ್ಕಾರದ ಗಮನ ಸೆಳೆಯಲಾಗಿದೆ. ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸುಳ್ಯ ನಗರ ಪಂಚಾಯತ್ ನ ಮಾಜಿ ಸದಸ್ಯರಾದ ಶ್ರೀ ರಿಯಾಜ್ ಕಟ್ಟೆಕ್ಕಾರ್ ಅವರು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜವಾಬ್ದಾರಿ ಹೊಂದಿರುವ ಮಾನ್ಯ ಶ್ರೀ ಯು.ಟಿ. ಖಾದರ್ ಅವರಿಗೆ ಈ ಕುರಿತು ಅಧಿಕೃತ ಮನವಿ ಸಲ್ಲಿಸಿದ್ದಾರೆ.
ಸದ್ಯಕ್ಕ ಸರ್ಕಾರದ ಜಾಗ ಅಥವಾ ಸ್ವಂತ ಕಟ್ಟಡ ಲಭ್ಯವಿಲ್ಲದಿದ್ದಲ್ಲಿ, ಸರ್ಕಾರದ ನಿಯಮಾನುಸಾರ ಸೂಕ್ತ ಕಟ್ಟಡವನ್ನು ಬಾಡಿಗೆಗೆ ಪಡೆದು ಹಾಸ್ಟೆಲ್ ಆರಂಭಿಸಲು ಅವಕಾಶ ಕಲ್ಪಿಸಬೇಕು.
ಬಾಡಿಗೆ ಹಾಗೂ ಅಗತ್ಯ ನಿರ್ವಹಣಾ ವೆಚ್ಚವನ್ನು ಸಂಬಂಧಪಟ್ಟ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿಯಮಾನುಸಾರ ಮಂಜೂರು ಮಾಡಿ ತ್ವರಿತವಾಗಿ ಹಾಸ್ಟೆಲ್ ಕಾರ್ಯಾರಂಭಕ್ಕೆ ಅನುಮೋದನೆ ನೀಡಬೇಕು.
ವಿದ್ಯಾರ್ಥಿಗಳಿಗೆ ತಕ್ಷಣಕ್ಕೆ ವಸತಿ ಸೌಲಭ್ಯ ಕಲ್ಪಿಸಿದ ಬಳಿಕ, ಮುಂದಿನ ದಿನಗಳಲ್ಲಿ ಸೂಕ್ತ ಸರ್ಕಾರಿ ಜಾಗ ಲಭ್ಯವಾದಾಗ ಶಾಶ್ವತ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬಹುದು.
ಸುಳ್ಯ ಭಾಗದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಈ ಬೇಡಿಕೆಗೆ ವಿಶೇಷ ಆದ್ಯತೆ ನೀಡಿ ಶೀಘ್ರವೇ ಅಗತ್ಯ ಮಂಜೂರಾತಿ ಹಾಗೂ ಅನುದಾನ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.