ಸುಳ್ಯದ ಶಾರದಾ ಕಾಲೇಜಿನಲ್ಲಿ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಹಾಗೂ ಸಂವಾದ ಕಾರ್ಯಕ್ರಮ


ಸುಳ್ಯ: ಸ್ಥಳೀಯ ಶಾರದಾ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ, ಪ್ರಜಾಧ್ವನಿ ಕರ್ನಾಟಕ, ಪ್ರಜ್ಞಾವಂತ ಭಾರತ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಸಂವಾದ ಕಾರ್ಯಕ್ರಮವು ಮಂಗಳವಾರ ಶಾರದಾ ಶಾಲಾ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಗಣ್ಯ ಅತಿಥಿಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾಧ್ವನಿ ಕರ್ನಾಟಕ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ್ ಮುಂಡೋಡಿ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ರಾಘವೇಂದ್ರ ಹಾಲ್ಕೆರೆ ತುಮರಿ ಅವರು ಮಾತನಾಡಿ, ಗಾಂಧೀಜಿ, ನೆಹರೂ ಮತ್ತು ಅಂಬೇಡ್ಕರ್ ಅವರ ಸ್ವಾತಂತ್ರ್ಯ ಸಂಗ್ರಾಮದ ಕಷ್ಟ ಹಾಗೂ ತ್ಯಾಗಗಳನ್ನು ಸ್ಮರಿಸಿದರು. ಗಾಂಧೀಜಿ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿ ನಿಂತರೆ, ನೆಹರೂ ದೇಶಕ್ಕೆ ಆರ್ಥಿಕ ಸ್ವಾತಂತ್ರ್ಯ ಹಾಗೂ ಅಂಬೇಡ್ಕರ್ ಸಾಮಾಜಿಕ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಬಣ್ಣಿಸಿದರು. ವಿದ್ಯಾರ್ಥಿಗಳು ಈ ಹಿರಿಯ ಹೋರಾಟಗಾರರ ಬದುಕಿನ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಆರೋಗ್ಯವಂತ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಹಾಗೂ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಬೇಕೆಂದು ಕರೆ ನೀಡಿದರು. ಇದೇ ವೇಳೆ ಕರ್ನಾಟಕ ಸರ್ಕಾರದ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕರಾದ ಕೆ. ಪಿ. ಜಾನಿ ಅವರು ಪ್ರಜಾಧ್ವನಿ ಕರ್ನಾಟಕ ಸಂಘಟನೆಯ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಗೌಡ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ಅವರು, ಗಾಂಧಿ, ನೆಹರು, ಅಂಬೇಡ್ಕರ್ ಮತ್ತು ಸಂವಿಧಾನವನ್ನು ದೇಶದ ಒಳಗಡೆ ನಾವು ವಿಮರ್ಶಿಸಬಹುದು  ಆದರೆ ವಿದೇಶಗಳಲ್ಲಿ ಅದು ಸಾಧ್ಯವಿಲ್ಲ. ನಮ್ಮ ಸಂವಿಧಾನವು ಅತ್ಯಂತ ಗಟ್ಟಿಯಾಗಿದ್ದು, ಸಂವಿಧಾನವೇ ನಮ್ಮೆಲ್ಲರ ಧರ್ಮವಾಗಿದೆ ಎಂದು ಅಭಿಪ್ರಾಯಪಟ್ಟರು.

ತೀವ್ರ ಪೈಪೋಟಿಯಿಂದ ಕೂಡಿದ್ದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶಾಲಾ ಮಟ್ಟದಿಂದ ಆಯ್ಕೆಯಾದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಮರ್ಕಂಜ ಸರಕಾರಿ ಪ್ರೌಢಶಾಲೆಯ ಅನಘ ಎಂ. ಪ್ರಥಮ ಸ್ಥಾನ ಗಳಿಸಿದರೆ, ಎಣ್ಮೂರು ಸರಕಾರಿ ಪ್ರೌಢಶಾಲೆಯ ತನಿಷಾ ಪಿ. ದ್ವಿತೀಯ ಸ್ಥಾನ ಹಾಗೂ ಅಜ್ಜಾವರ ಸರಕಾರಿ ಪ್ರೌಢಶಾಲೆಯ ಮಾನ್ಯ ತೃತೀಯ ಸ್ಥಾನ ಪಡೆದುಕೊಂಡರು. ಸಾಧನೆಗೈದ ಈ ಮೂವರನ್ನೂ ಕಾರ್ಯಕ್ರಮದ ವೇದಿಕೆಯಲ್ಲಿ ಬಹುಮಾನ ಹಾಗೂ ಗೌರವ ಅಭಿನಂದನೆ ನೀಡಿ ಆದರಿಸಲಾಯಿತು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಎಸ್. ಹರಗಿ, ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಮಲ ರಾಮಚಂದ್ರ, ಶಾರದಾ ಕಾಲೇಜಿನ ಪ್ರಾಂಶುಪಾಲೆ ಸ್ವರ್ಣಕಲಾ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಭಾರತಿ, ಶಿಕ್ಷಣ ಸಂಯೋಜಕ ಉದಯ ಕುಮಾರ್ ಹಾಗೂ ಶಾಲಾ ವಿದ್ಯಾರ್ಥಿ ನಾಯಕ-ನಾಯಕಿಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರಜಾಧ್ವನಿ ಕರ್ನಾಟಕ ತಂಡದ ಪ್ರಮುಖರಾದ ಗೋಪಾಲ್ ಪೆರಾಜೆ, ವಸಂತ ಪೆಲ್ತಡ್ಕ, ಮಹಮದ್ ಕುಂಞಿ ಗೂನಡ್ಕ, ಮೋಹನ್ ಕೆ. ಪಿ., ಶಿವಶಂಕರ್ ಕಡಬ, ಮಂಜುನಾಥ್ ಮಡ್ತಿಲ, ಕೇಶವ ಪಾಟಾಳಿ, ಇಬ್ರಾಹಿಮ್ ಎ. ಕೆ., ಮಹೇಶ್ ಬೆಳ್ಳಾರ್ಕರ್, ಭರತ್ ಕುಕ್ಕುಜಡ್ಕ, ಪ್ರಮೀಳಾ ಪೆಲ್ತಡ್ಕ, ಲಕ್ಷ್ಮೀಶ ಗಬ್ಲಡ್ಕ, ಚೆನ್ನಕೇಶವ ಚೊಕ್ಕಾಡಿ, ದಿವಾಕರ ಪೈ ಅರಂಬೂರು, ಫಿಲೋಮಿನ ಕ್ರಾಸ್ತ, ಲಲನ ಕೆ. ಆರ್., ಗಿರಿಯಪ್ಪ ಗೌಡ ಬಿಳಿನೆಲೆ, ಲೂಕಾಸ್ ಟಿ. ಐ. ಹಾಗೂ ಅಶ್ರಫ್ ಸಾಹುಕಾರ್ ಸೇರಿದಂತೆ ಶಿಕ್ಷಕ ವೃಂದದವರು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Reply

Discover more from

Subscribe now to keep reading and get access to the full archive.

Continue reading