ಕೇರಳದ ಕೋಟ್ಟಾಯಂ ತೇಕೆಕ್ಕರೆ ಪಂಚಾಯತ್ಗೆ ಒಳಪಡುವ ಪ್ರದೇಶದಲ್ಲಿ ಶನಿವಾರ ಮುಂಜಾನೆ ಎರಡು ಗಂಟೆಯ ಸುಮಾರಿಗೆ ಸುರಿದ ಅತಿ ತೀವ್ರ ಮಳೆಯಿಂದ ಉಂಟಾದ ಭೀಕರ ಭೂಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಣ್ಣಿನಡಿ ಸಿಲುಕಿ ಜೋಣಿ ಅವರ ಪತ್ನಿ ರೇಜಿನಾ ಮತ್ತು ಮಗ ಜೋಸಿಫಿನ್ ಮೃತಪಟ್ಟಿದ್ದು, ಗಂಟೆಗಳ ಕಾಲ ನಡೆದ ಅತ್ಯಂತ ಕಷ್ಟಕರವಾದ ಕಾರ್ಯಾಚರಣೆ ಯ ಬಳಿಕ ಇವರ ಮೃತದೇಹಗಳನ್ನು ಮನೆಯ ಅವಶೇಷಗಳಡಿಯಿಂದ ಹೊರತೆಗೆಯಲಾಯಿತು. ಘಟನಾ ಸ್ಥಳದಲ್ಲಿ ಮನೆ ನಿಂತಿದ್ದ ಜಾಗದಲ್ಲಿ ಈಗ ಕೇವಲ ಒಂದು ಮಣ್ಣಿನ ದಿನ್ನೆ ಮಾತ್ರ ಉಳಿದಿದ್ದು, ಭೂಕುಸಿತದ ತೀವ್ರತೆಗೆ ಮನೆ ಸುಮಾರು 10 ರಿಂದ 12 ಮೀಟರ್ ದೂರಕ್ಕೆ ಕೊಚ್ಚಿಕೊಂಡು ಹೋಗಿದೆ. ಅಲ್ಲಿ ಒಂದು ಮನೆ ಇತ್ತು ಎಂದು ಕೂಡ ಗುರುತಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಆ ಪ್ರದೇಶವು ಸಂಪೂರ್ಣ ನಾಶವಾಗಿದೆ. ದುರಂತ ಸಂಭವಿಸಿದ ಸಮಯದಲ್ಲಿ ಮನೆಯಲ್ಲಿ ರೇಜಿನಾ ಮತ್ತು ಮಗ ಜೋಸಿಫಿನ್ ಮಾತ್ರ ಇದ್ದರು. ರೇಜಿನಾ ಅವರ ಪತಿ ಜೋಣಿ ಹತ್ತಿರದ ವೃದ್ಧರೊಬ್ಬರ ಮನೆಯಲ್ಲಿ ಕಾವಲು ನಿಲ್ಲಲು ಹೋಗಿದ್ದರಿಂದ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮತ್ತೊಬ್ಬ ಮಗ ಕೆಲಸದ ನಿಮಿತ್ತ ಎರ್ನಾಕುಲದಲ್ಲಿದ್ದ. ದುರಂತದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಬಂಧಿಕರು ಹಾಗೂ ಸ್ಥಳೀಯರ ಆಕ್ರಂದನ ಎಲ್ಲರಲ್ಲೂ ತೀವ್ರ ನೋವನ್ನುಂಟು ಮಾಡಿದೆ.