ಜಂತರ್ ಮಂತರ್: ಪ್ರತಿಭಟನೆ ನಡುವೆ ಋತುಸ್ರಾವ, ಜೆನ್ ಝೀ ಮನಸ್ಥಿತಿಗೆ ಧನ್ಯವಾದ ತಿಳಿಸಿದ ಯುವತಿ

 

ಸಿಜೆಪಿ (CJP) ಪ್ರತಿಭಟನೆಯು ಇನ್ನೂ ದೇಶದ ರಾಜಧಾನಿಯಲ್ಲಿ ಮುಂದುವರಿದಿದೆ. ದೇಶದ ವಿವಿಧ ಭಾಗಗಳಲ್ಲೂ ಈ ಪ್ರತಿಭಟನೆಯನ್ನು ಬೆಂಬಲಿಸಿ ಕಾರ್ಯಕ್ರಮಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿವೆ.
ಮತ್ತೊಂದೆಡೆ, ಪ್ರತಿಭಟನೆಯ ಸಂದರ್ಭದಲ್ಲಿ ನೀರು ಅಥವಾ ಆಹಾರ ಸಿಗದವರಿಗೆ ನೆರವಾಗಲು ಹಲವರು ಮುಂದೆ ಬರುತ್ತಿದ್ದಾರೆ. ಅದೇ ರೀತಿ, ಖುಷ್ಬೂ ಎಂಬ ಯುವತಿಯೊಬ್ಬಳು ತಮಗಾದ ಒಂದು ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾಗ ದಿಢೀರನೆ ಮುಟ್ಟಾಗಿ (ಋತುಸ್ರಾವ), ಬಟ್ಟೆಯ ಮೇಲೆ ರಕ್ತದ ಕಲೆಯಾದಾಗ ತಮ್ಮ ನೆರವಿಗೆ ಬಂದ ಅಪರಿಚಿತರ ಬಗ್ಗೆ ಈ ಯುವತಿ ಹೇಳಿಕೊಂಡಿದ್ದಾರೆ.
“ನನಗೆ ಅನಿರೀಕ್ಷಿತವಾಗಿ ಪೀರಿಯಡ್ಸ್ ಆಯಿತು, ಬಟ್ಟೆಯೆಲ್ಲ ರಕ್ತದ ಕರೆಯಾಗಿ ಹಾಳಾಯಿತು. ಆ ಕಷ್ಟದ ಸಮಯದಲ್ಲಿ ನನ್ನ ಸಹಾಯಕ್ಕೆ ಮುಂದೆ ಬಂದವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ” ಎಂದು ಖುಷ್ಬೂ ಬರೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಯುವಕನೊಬ್ಬ ತನ್ನ ಬ್ಯಾಗ್‌ನಿಂದ ಸ್ಯಾನಿಟರಿ ಪ್ಯಾಡ್ ತೆಗೆದು ಯುವತಿಗೆ ನೀಡುವುದನ್ನು ಕಾಣಬಹುದು. ಸಹಾಯ ಮಾಡಿದ ಯುವಕ ಹಾಗೂ ಆತನೊಂದಿಗಿದ್ದ ಇತರರಿಗೆ ಖುಷ್ಬೂ ಧನ್ಯವಾದ ತಿಳಿಸಿದ್ದಾರೆ.
“ಪ್ರತಿಭಟನೆಯ ಸಮಯದಲ್ಲಿ ನನಗೆ ಮುಟ್ಟಾದಾಗ ಕೆಲವು ಯುವಕರು ಮತ್ತು ಒಬ್ಬ ಹುಡುಗಿ ಸೇರಿ ನನಗೆ ಸಹಾಯ ಮಾಡಿದರು. ಮುಖ್ಯವಾಗಿ ಅದರಲ್ಲಿ ಒಬ್ಬ ಯುವಕ ಮುಂಚೂಣಿಯಲ್ಲಿದ್ದ. ಅವರು ನನ್ನನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು, ಸ್ವಚ್ಛಗೊಳಿಸಲು ಟಿಶ್ಯೂ ಪೇಪರ್ ಮತ್ತು ಸ್ಯಾನಿಟರಿ ಪ್ಯಾಡ್ ನೀಡಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು” ಎಂದು ವೀಡಿಯೊದಲ್ಲಿ ಬರೆಯಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ಅತ್ಯಂತ ವೇಗವಾಗಿ ವೈರಲ್ ಆಗಿದೆ. ಯುವತಿಗೆ ಸಹಾಯ ಮಾಡಲು ಬಂದ ಯುವಕರನ್ನು ಅಭಿನಂದಿಸಿ ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ. ಋತುಸ್ರಾವ ಎಂಬುದು ತೀರಾ ಸಾಮಾನ್ಯ ವಿಷಯ ಮತ್ತು ಅದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇಂದಿನ ಯುವಕರಲ್ಲಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. “ನಿಮಗೆ ಸಹಾಯ ಮಾಡಲು ಸಾಧ್ಯವಾಗಿದ್ದಕ್ಕೆ ಸಂತೋಷವಾಗಿದೆ” ಎಂದು ಯುವತಿಗೆ ನೆರವಾದವರಲ್ಲೊಬ್ಬರು ಕಮೆಂಟ್ ಮಾಡಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading