




ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಜೀರ್ಮುಕ್ಕಿ ನಿವಾಸಿ, 20 ವರ್ಷದ ಯುವಕ ಝುಬೈರ್ ಎಂಬವರು ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಸುಳ್ಯದಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದ ಝುಬೈರ್ ಬಿಡುವಿನ ಹೊತ್ತಲಗಲಿ ಸುಳ್ಯದ ಹೋಟೆಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಅನಾರೋಗ್ಯದ ಕಾರಣ ಕೆಲ ಕಾಲ ಈ ವರ್ಷ ಕಾಲೇಜಿಗೆ ತೆರಳದೇ ಇದ್ದು ಬರುವ ವರ್ಷ ವ್ಯಾಸಂಗ ಮುಂದುವರೆಸುವ ಉದ್ದೇಶದೊಂದಿಗೆ ಅನಾರೋಗ್ಯ ವಾಸಿಯಾದಾಗ ಬೆಂಗಳೂರಿನ ಕಾರ್ ವಾಷ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು.
ಜುಲೈ 2, 2026 ರಂದು ಅವರು ತಮ್ಮ ಕೆಲಸದ ಸ್ಥಳದಿಂದ ಊರಿಗೆ ಬರುವುದಾಗಿ ಹೇಳಿ ಹೊರಟಿದ್ದರು. ಆದರೆ, ಅವರು ಇದುವರೆಗೆ ಮನೆಗೂ ತಲುಪದೆ, ಮರಳಿ ಕೆಲಸದ ಸ್ಥಳಕ್ಕೂ ಹೋಗದೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಸದ್ಯ ಯುವಕನ ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಮಗ ನಾಪತ್ತೆಯಾಗಿರುವ ಬಗ್ಗೆ ಆತನ ತಾಯಿ ಜುಹರಾ ಅವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸುಳ್ಯ ಪೊಲೀಸರು ಯುವಕನ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.
ಈ ಯುವಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

