ಬೆಂಗಳೂರು: ಕಳೆದೊಂದು ವಾರದಿಂದ ಇಡೀ ರಾಜ್ಯದಲ್ಲೇ ತೀವ್ರ ಸಂಚಲನ ಮತ್ತು ಆಕ್ರೋಶ ಸೃಷ್ಟಿಸಿದ್ದ ಪುಟಾಣಿ ವೆನ್ನಿಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಸ್ವಂತ ತಾಯಿ ಪ್ರಿಯಾಂಕಾಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಸ್ನೇಹಿತೆಯ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬೆಂಗಳೂರಿನ ಕಾಡುಗೋಡಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.ಬಂಧನದ ಬಳಿಕ ಆರೋಪಿ ಪ್ರಿಯಾಂಕಾಳನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಆಳವಾದ ತನಿಖೆಗಾಗಿ ಕೋರ್ಟ್ ಆರೋಪಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.
ಮಗಳು ಕಪ್ಪಗಿದ್ದಾಳೆ ಎಂಬ ಕ್ರೂರ ಕಾರಣಕ್ಕಾಗಿ ಹೆತ್ತ ತಾಯಿ ಪ್ರಿಯಾಂಕಾ, ತನ್ನ ಪ್ರಿಯಕರ ಮೋಹನ್ ಜೊತೆ ಸೇರಿ ಮಗು ವೆನ್ನಿಲಾಳನ್ನು ಹತ್ಯೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಘಟನೆ ಬಳಿಕ ಕಾಡುಗೋಡಿ ಪೊಲೀಸರು ಪ್ರಿಯಕರ ಮೋಹನ್ನನ್ನು ತಕ್ಷಣವೇ ಬಂಧಿಸಿದ್ದರು. ಆದರೆ ತಾಯಿ ಪ್ರಿಯಾಂಕಾ ತಲೆಮರೆಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಳು.






