ಬೆಂಗಳೂರು: ನಗರವನ್ನು ಬೆಚ್ಚಿಬೀಳಿಸಿದ್ದ ಆರು ವರ್ಷದ ಬಾಲಕಿ ವೆನ್ನಿಲಾಳ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ಬಾಲಕಿಯ ಸಾವು ಕೊಲೆ ಎಂದು ಸ್ಪಷ್ಟಪಡಿಸಿರುವ ಪೊಲೀಸರು, ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ತಾಯಿ ಪ್ರಿಯಾಂಕಾಳ ಪ್ರಿಯಕರ ಜಿ.ಎನ್. ಮೋಹನ್ ಎಂಬಾತನನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಮೋಹನ್, ವಿಚಾರಣೆಯ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿದ್ದ ಈತನನ್ನು ಜೂನ್ 4 ರಂದು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಅದೇ ಸಮಯದಲ್ಲಿ, ಮಗುವಿನ ತಾಯಿ ಪ್ರಿಯಾಂಕಾ ಇಂದಿಗೂ ತಲೆಮರೆಸಿಕೊಂಡಿದ್ದು, ಆಕೆಗಾಗಿ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಘಟನೆಯ ದಿನದಂದು ಪ್ರಿಯಾಂಕಾ, ಮಗಳು ವೆನ್ನಿಲಾ ಮತ್ತು ಮೋಹನ್ ಒಟ್ಟಿಗೆ ಶಾಪಿಂಗ್ಗೆ ಹೋಗಿದ್ದರು. ಆ ಬಳಿಕ ಮೂವರೂ ಹೊಸಕೋಟೆಗೆ ಊಟ ಮಾಡಲು ತೆರಳಿ, ಅಲ್ಲಿಂದ ಬಿರಿಯಾನಿ ಮತ್ತು ಐಸ್ಕ್ರೀಮ್ ಖರೀದಿಸಿದ್ದರು. ಮರಳಿ ಕಾರಿನಲ್ಲಿ ಮನೆಗೆ ವಾಪಸಾಗುತ್ತಿದ್ದಾಗ, ಮಗುವಿನ ಕೈಯಲ್ಲಿದ್ದ ಐಸ್ಕ್ರೀಮ್ ಕಾರಿನೊಳಗೆ ಬಿದ್ದಿದೆ. ಕಾರಿನ ಸೀಟು ಮತ್ತು ಮ್ಯಾಟ್ ಮೇಲೆ ಐಸ್ಕ್ರೀಮ್ ಬಿದ್ದಿದ್ದು ಮೋಹನ್ನನ್ನು ತೀವ್ರವಾಗಿ ಕೆರಳಿಸಿತ್ತು.ಇದಾದ ನಂತರ ಮತ್ತೊಂದು ಐಸ್ಕ್ರೀಮ್ ಬೇಕೆಂದು ಕೇಳಿ ಮಗು ಅಳಲು ಪ್ರಾರಂಭಿಸಿದೆ. ಇದು ಮೋಹನ್ನನ್ನು ಮತ್ತಷ್ಟು ಕೆರಳಿಸಿದ್ದು, ಆತ ತನ್ನ ಮೊಣಕೈಯಿಂದ ಮಗುವಿನ ಹೊಟ್ಟೆಗೆ ಸತತವಾಗಿ ಗುದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮಗುವಿನ ಅಳು ನಿಲ್ಲಿಸಲು ಆತ ಬಾಯಿ ಮತ್ತು ಮೂಗನ್ನು ಗಟ್ಟಿಯಾಗಿ ಒತ್ತಿ ಹಿಡಿದಿದ್ದೇ ಸಾವಿಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಉಸಿರುಗಟ್ಟುವಿಕೆ ಮತ್ತು ಆಂತರಿಕ ಗಾಯಗಳೇ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆಯ ವರದಿಯಿಂದ ಸ್ಪಷ್ಟವಾಗಿತ್ತು.ದಾವಣಗೆರೆ ಮೂಲದ ಪ್ರವೀಣ್ ಮತ್ತು ವಕೀಲೆ ಪ್ರಿಯಾಂಕಾ ದಂಪತಿಯ ಮಗಳಾದ ವೆನ್ನಿಲಾ ಕಳೆದ ಮಾರ್ಚ್ 24 ರಂದು ನಿಗೂಢ ಸಂದರ್ಭದಲ್ಲಿ ಸಾವನ್ನಪ್ಪಿದ್ದಳು. ಈ ವರ್ಷದ ಆರಂಭದಲ್ಲಿ ಪ್ರವೀಣ್ ಮತ್ತು ಪ್ರಿಯಾಂಕಾ ವಿಚ್ಛೇದನ ಪಡೆದಿದ್ದರು. ಪ್ರಿಯಾಂಕಾ ತನಗೆ ಮಾನಸಿಕ ಒತ್ತಡ ಹೇರಿ ವಿಚ್ಛೇದನದ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಳು ಎಂದು ಪ್ರವೀಣ್ ಆರೋಪಿಸಿದ್ದಾರೆ.

ವಿಚ್ಛೇದನದ ನಂತರ ಹಿರಿಯ ಮಗಳು ಪ್ರವೀಣ್ ಜೊತೆಯೂ, ಎರಡನೇ ಮಗಳಾದ ವೆನ್ನಿಲಾ ಪ್ರಿಯಾಂಕಾ ಜೊತೆಯೂ ವಾಸಿಸುತ್ತಿದ್ದರು.ಬಳಿಕ ಪ್ರಿಯಾಂಕಾ ತನ್ನ ಕಾಲೇಜು ದಿನಗಳ ಸ್ನೇಹಿತನಾಗಿದ್ದ ಮೋಹನ್ ಜೊತೆ ಬೆಂಗಳೂರಿನ ಐಷಾರಾಮಿ ವಿಲ್ಲಾವೊಂದರಲ್ಲಿ ವಾಸಿಸಲು ಪ್ರಾರಂಭಿಸಿದಳು.

ಮೋಹನ್ ಈಗಾಗಲೇ ವಿವಾಹಿತನಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದಾನೆ. ಅವರನ್ನು ಕೈಬಿಟ್ಟು ಆತ ಪ್ರಿಯಾಂಕಾಳೊಂದಿಗೆ ವಾಸಿಸಲು ಆರಂಭಿಸಿದ್ದ. ಕಾಲೇಜು ದಿನಗಳಲ್ಲಿ ಇವರಿಬ್ಬರ ನಡುವೆ ಪ್ರೇಮವಿತ್ತು ಮತ್ತು 2025 ರ ನವೆಂಬರ್ನಲ್ಲಿ ಇವರು ಮತ್ತೆ ಭೇಟಿಯಾಗಿದ್ದರು ಎಂದು ದೂರುದಾರರಾದ ಪ್ರವೀಣ್ ಆರೋಪಿಸಿದ್ದಾರೆ. ಈ ಹಿಂದೆ ಮೋಹನ್ನ ಪತ್ನಿ ಆತನನ್ನು ಹುಡುಕಿಕೊಂಡು ಬಂದಾಗ ಇವರ ನಡುವೆ ಜಗಳವೂ ನಡೆದಿತ್ತು.

ಮಗಳ ಸಾವಿನ ಬಗ್ಗೆ ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸಿದ್ದ ತಂದೆ ಪ್ರವೀಣ್, ಸಮಗ್ರ ತನಿಖೆಗೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದರು. ತದನಂತರ ಪೊಲೀಸ್ ತಂಡವು ವೈಜ್ಞಾನಿಕವಾಗಿ ನಡೆಸಿದ ತನಿಖೆ ಮತ್ತು ಕಾರಿನಲ್ಲಿ ನಡೆಸಿದ ವಿಧಿವಿಜ್ಞಾನ (Forensic) ತಪಾಸಣೆಯ ಬಳಿಕ ಮಗುವಿನ ಮೇಲಿನ ಕ್ರೂರ ದೌರ್ಜನ್ಯದ ವಿಷಯ ಹೊರಬಂದಿದೆ. ಈ ಪ್ರಕರಣದಲ್ಲಿ ಸದ್ಯ ತಲೆಮರೆಸಿಕೊಂಡಿರುವ ಪ್ರಿಯಾಂಕಾಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.




