
ಕಳೆದ ಸಾಲಿನಲ್ಲಿ ಬಿಡುಗಡೆ ಗೊಂಡು ಪ್ರೇಕ್ಷಕರ ಮನಗೆದ್ದ ಚಿತ್ರಗಳಲ್ಲಿ ಒಂದಾದ ಭಾವತೀರ ಯಾನ ಚಲನಚಿತ್ರವು ಮೇ 08 ರಂದು ಸುಳ್ಯದಲ್ಲಿ ಮರುಬಿಡುಗಡೆಯಾಗಲಿದೆ. ಈ ಕುರಿತು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಮತ್ತು ಗಣ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ. ಫೌಂಡೇಶನ್ ಅಧ್ಯಕ್ಷರಾದ ಎಂ.ಬಿ. ಸದಾಶಿವ ಅವರು, ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅತ್ಯುತ್ತಮ ಗುಣಮಟ್ಟದ ಚಲನಚಿತ್ರವನ್ನು ಹೊರತಂದಿರುವುದು ಒಂದು ದೊಡ್ಡ ಸಾಧನೆಯಾಗಿದೆ ಎಂದು ತಿಳಿಸಿದರು. ಚಿತ್ರ ನಿರ್ಮಾಪಕರಾದ ಶೈಲೇಶ್ ಅಂಬೆಕಲ್ಲು, ಹರಿ ಪೈಂದೋಡಿ, ಲತಾಶ್ರೀ ಸುಪ್ರೀತ್ ಸೇರಿದಂತೆ ಹಲವರು ಪತ್ರಿಕಗೋಷ್ಠಿಯಲಿ ಹಾಜರಿದ್ದರು. ಕಲೆ ಮತ್ತು ಸಾಹಿತ್ಯದ ಸೊಬಗನ್ನು ಹೊಂದಿರುವ ಇಂತಹ ಚಿತ್ರಗಳು ಹೆಚ್ಚಿನ ಜನರನ್ನು ತಲುಪಬೇಕು ಎಂದು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಈ ಚಿತ್ರವು ಮೇ 08 ರಂದು ಸುಳ್ಯದ ಚಿತ್ರಮಂದಿರಗಳಲ್ಲಿ ಮತ್ತೆ ತೆರೆಗೆ ಬರಲಿದೆ. ರಾತ್ರಿ 7 ಗಂಟೆಗೆ ಸುಳ್ಯದಲಿ ಪ್ರಥಮ ಪ್ರದರ್ಶನ ನಡೆಯಲಿದೆ. ಪ್ರೇಕ್ಷಕರಿಂದ ಈಗಾಗಲೇ ಉತ್ತಮ ವಿಮರ್ಶೆ ಪಡೆದಿರುವ ಈ ಚಿತ್ರವು ಈಗ ಸುಳ್ಯದ ಜನತೆಗಾಗಿ ಮತ್ತೆ ಪ್ರದರ್ಶನಗೊಳ್ಳುತ್ತಿದೆ. ಕಲಾತ್ಮಕ ಮತ್ತು ಭಾವನಾತ್ಮಕ ಕಥಾಹಂದರ ಹೊಂದಿರುವ ಭಾವತೀರ ಯಾನ ಚಿತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಬೆಂಬಲಿಸಬೇಕೆಂದು ಚಿತ್ರತಂಡದವರು ವಿನಂತಿಸಿದ್ದಾರೆ.






