ಸುಳ್ಯ ತಾಲೂಕಿನ ಅಡ್ತಲೆ ಕಾಡಿನ ಮಧ್ಯೆ ಹಳೆಯ ಪ್ರೀಮಿಯರ್ ಪದ್ಮಿನಿ ಕಾರನ್ನೇ ತನ್ನ ಪ್ರಪಂಚವಾಗಿಸಿಕೊಂಡು ಬದುಕುತ್ತಿರುವ ಚಂದ್ರಶೇಖರ ನೂಜಾಲ ಎಂಬ ವಿಶಿಷ್ಟ ವ್ಯಕ್ತಿಯನ್ನು ಮಾಜಿ ಸಚಿವ ಸುರೇಶ್ ಕುಮಾರ್ ಅವರು ಭೇಟಿ ಮಾಡಿ ಅವರ ಜೀವನದ ಅಪೂರ್ವ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕಳೆದ 23 ವರ್ಷಗಳಿಂದ ಹಠ, ಸ್ವಾವಲಂಬನೆ ಮತ್ತು ಸರಳತೆಯ ಜೀವನ ನಡೆಸುತ್ತಿರುವ ಚಂದ್ರಶೇಖರ್ ಅವರ ಬದುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಕುತೂಹಲ ಮೂಡಿಸಿತ್ತು. ಪತ್ರಕರ್ತರು, ಯೂಟೂಬರ್ಗಳು ದಂಡೋಪಾದಿಯಲ್ಲಿ ಬಂದು ಇವರ ಸಂದರ್ಶನ ನಡೆಸಿ ಹೋದರು. ಬಹಳ ದಿನಗಳ ಆಸೆಯಂತೆ ಸುರೇಶ್ ಕುಮಾರ್ ಅವರು ಅಡ್ತಲೆ ಗ್ರಾಮದ ಬಳಿಯ ಕಾಡಿಗೆ ತೆರಳಿ ಸುಮಾರು ಎಪ್ಪತ್ತು ನಿಮಿಷಗಳ ಕಾಲ ಅವರೊಂದಿಗೆ ಮಾತುಕತೆ ನಡೆಸಿದರು.







ಸೊಸೈಟಿಯಿಂದ ಹರಾಜಾದ ತಮ್ಮ ಹಳೆಯ ಜಾಗಕ್ಕಾಗಿ ನ್ಯಾಯ ಸಿಗಬೇಕೆಂದು ಪಟ್ಟು ಹಿಡಿದಿರುವ ಚಂದ್ರಶೇಖರ್, ಜಿಲ್ಲಾಡಳಿತ ನೀಡಿದ ಪರ್ಯಾಯ ಜಾಗವನ್ನೂ ನಿರಾಕರಿಸಿ ಹಠಕ್ಕೆ ಬಿದ್ದಿದ್ದಾರೆ. ತನ್ನ ಜಾಗ ಸಿಗುವವರೆಗೂ ಗಡ್ಡ ತೆಗೆಯುವುದಿಲ್ಲ ಎಂಬ ಶಪಥ ಮಾಡಿರುವ ಇವರು, ಕಾಡಿನ ಮಧ್ಯೆಯೇ ಬಿದಿರಿನ ಬುಟ್ಟಿಗಳನ್ನು ಹೆಣೆದು ಜೀವನ ಸಾಗಿಸುತ್ತಿದ್ದಾರೆ. ಹತ್ತಿರದ ಹಳ್ಳದ ನೀರು, ತಾವೇ ತಯಾರಿಸಿಕೊಳ್ಳುವ ಸರಳ ಆಹಾರ ಹಾಗೂ ಸೋಲಾರ್ ದೀಪ ಇವರ ದಿನಚರಿಯ ಭಾಗವಾಗಿದೆ.
ಚಂದ್ರಶೇಖರ್ ಅವರ ಈ ಏಕಾಂತ ಬದುಕಿನಲ್ಲೂ ಅದ್ಭುತ ಲೋಕವಿದೆ. ತಮ್ಮ ಕಾರಿನಲ್ಲೇ ಮಲಗುವ ವ್ಯವಸ್ಥೆ, ಸೋಲಾರ್ ಮೂಲಕ ಮೊಬೈಲ್ ಮತ್ತು ರೇಡಿಯೋ ಚಾರ್ಜ್ ಮಾಡಿಕೊಳ್ಳುವ ತಾಂತ್ರಿಕ ಕೌಶಲ ಹಾಗೂ ದೇಶ-ವಿದೇಶಗಳ ವಿದ್ಯಮಾನಗಳ ಕುರಿತ ಜ್ಞಾನ ಭೇಟಿ ನೀಡಿದವರಲ್ಲಿ ಅಚ್ಚರಿ ಮೂಡಿಸಿದೆ. ಅವರ ಹಾಸ್ಯಪ್ರಜ್ಞೆ ಮತ್ತು ಕಾನೂನು ಜ್ಞಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಸುರೇಶ್ ಕುಮಾರ್, ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಸಲು ಪ್ರಯತ್ನಿಸಿದರೂ ಚಂದ್ರಶೇಖರ್ ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ. “ನ್ಯಾಯ ಸಿಗುವವರೆಗೂ ನಾನು ಇಲ್ಲೇ ಇರುತ್ತೇನೆ” ಎಂಬ ಅವರ ಸ್ಪಷ್ಟ ನುಡಿಗಳು ಅವರ ಸ್ವಾಭಿಮಾನಕ್ಕೆ ಸಾಕ್ಷಿಯಾಗಿವೆ.
ಬಿಸಿಲು, ಮಳೆ ಮತ್ತು ಕಾಡು ಪ್ರಾಣಿಗಳ ನಡುವಿನ ಇವರ ಈ ಕಠಿಣ ಬದುಕು ಪ್ರೇರಣೆಯ ಜೊತೆಗೆ ಆತಂಕವನ್ನೂ ಮೂಡಿಸುವಂತಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಮಾಹಿತಿ ಪಡೆದಿರುವ ಮಾಜಿ ಸಚಿವರು, ಚಂದ್ರಶೇಖರ್ ಅವರ ಹೋರಾಟದ ದಾರಿಯನ್ನು ಪರಿಚಯಿಸಿಕೊಂಡು ಅವರಿಗೆ ಸಾಧ್ಯವಿರುವ ಸಹಾಯ ಮಾಡುವ ಭರವಸೆ ನೀಡಿ ಬೀಳ್ಕೊಟ್ಟಿದ್ದಾರೆ. ಒಟ್ಟಾರೆಯಾಗಿ, ಒಂದು ಕಾರಿನ ಪುಟ್ಟ ಜಾಗದಲ್ಲಿ ಇಡೀ ಬದುಕನ್ನು ಕಟ್ಟಿಕೊಂಡಿರುವ ಈ ವ್ಯಕ್ತಿಯ ಭೇಟಿ ಅತ್ಯಂತ ವಿಶಿಷ್ಟ ಅನುಭವ ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

