ಸುಳ್ಯ ನಗರದಿಂದ ಕೆ.ವಿ.ಜಿ. ಕುರುಂಜಿಭಾಗ್ ಕಡೆಗೆ ತೆರಳುವ ರಸ್ತೆಯಲ್ಲಿ ಭಗವತಿ ದ್ವಾರದ ಬಳಿ ಸೃಷ್ಟಿಯಾಗಿದ್ದ ಬೃಹತ್ ಹೊಂಡಗಳನ್ನು ಸುಳ್ಯ ಬಸ್ ನಿಲ್ದಾಣದ ರಿಕ್ಷಾ ಚಾಲಕರು ಸ್ವಂತ ಖರ್ಚು ಹಾಗೂ ಶ್ರಮದಾನದ ಮೂಲಕ ಮುಚ್ಚಿ ಮಾದರಿಯಾಗಿದ್ದಾರೆ.
ರಸ್ತೆಯಲ್ಲಿದ್ದ ದೊಡ್ಡ ಹೊಂಡಗಳಿಂದಾಗಿ ವಾಹನ ಸವಾರರು ಮತ್ತು ಪಾದಾಚಾರಿಗಳು ನಿತ್ಯ ಪರದಾಡುತ್ತಿದ್ದರು. ಮಳೆಗಾಲದಲ್ಲಿ ನೀರು ತುಂಬಿಕೊಂಡು ಅಪಘಾತಗಳು ಸಂಭವಿಸುವ ಅಪಾಯವಿತ್ತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಎಚ್ಚೆತ್ತ ರಿಕ್ಷಾ ಚಾಲಕರು ಒಗ್ಗೂಡಿ, ಜಲ್ಲಿ ಕಲ್ಲು ಹಾಗೂ ಮಣ್ಣನ್ನು ಬಳಸಿ ಹೊಂಡಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಚಾಲಕರ ಈ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


