ಹಾಸನ: ತಂದೆ ಮೊಬೈಲ್ ಕೊಡಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮನನೊಂದ 13 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಹಾಸನ ಹೊರವಲಯದ ಯಡಿಯೂರು ಗ್ರಾಮದಲ್ಲಿ ಸಂಭವಿಸಿದೆ.
ಚಿತ್ರದುರ್ಗದ ಶ್ರೀನಿವಾಸ್ ಹಾಗೂ ಗೌರಮ್ಮ ದಂಪತಿಯ ಪುತ್ರ ಪ್ರೀತಂ (13) ಆತ್ಮಹತ್ಯೆಗೆ ಶರಣಾದ ದುರ್ದೈವಿ ಬಾಲಕ.
ಪ್ರೀತಂ ಚಿತ್ರದುರ್ಗದಲ್ಲಿ 7ನೇ ತರಗತಿ ಓದುತ್ತಿದ್ದನು. ಈ ಕುಟುಂಬವು ಉದ್ಯೋಗಕ್ಕಾಗಿ ಯಡಿಯೂರಿಗೆ ಬಂದಿದ್ದು, ಅಲ್ಲಿ ನಿರ್ಮಾಣ ಹಂತದಲ್ಲಿರುವ ಖಾಸಗಿ ಲೇಔಟ್ನಲ್ಲಿ ಕೆಲಸ ಮಾಡುತ್ತಾ ಅಲ್ಲೇ ಶೆಡ್ನಲ್ಲಿ ವಾಸವಾಗಿತ್ತು. ಶನಿವಾರವಷ್ಟೇ ಯಡಿಯೂರಿಗೆ ಬಂದಿದ್ದ ಪ್ರೀತಂ, ತನಗೆ ಮೊಬೈಲ್ ಫೋನ್ ಕೊಡಿಸುವಂತೆ ಪೋಷಕರ ಬಳಿ ನಿರಂತರವಾಗಿ ಜಾಗ್ರತೆ ಹಾಗೂ ಒತ್ತಾಯ ಮಾಡಿದ್ದನು.
ಆದರೆ, ತಂದೆ ಮೊಬೈಲ್ ಕೊಡಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇದರಿಂದ ತೀವ್ರ ನೊಂದ ಬಾಲಕ ಪ್ರೀತಂ, ಯಾರೂ ಇಲ್ಲದ ವೇಳೆ ಶೆಡ್ನೊಳಗೆ ಸೀರೆಯಿಂದ ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರೆದಿದೆ.






