ಸುಳ್ಯ: ಸಾಮಾಜಿಕ ರಂಗದ ಧುರೀಣರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಸಹಕಾರಿ ಕ್ಷೇತ್ರದ ದಿಗ್ಗಜರಾದ ಆದಮ್ ಕುಂಞಿ ಸಂಟ್ಯಾರ್ ಅವರ ಹಠಾತ್ ನಿಧನವು ಅತ್ಯಂತ ಆಘಾತಕಾರಿ ಮತ್ತು ಭರಿಸಲಾರದ ನಷ್ಟವಾಗಿದೆ. ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮೀರಝ್ ಸುಳ್ಯ ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಚೆಂಬು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಮತ್ತು ಸದಸ್ಯರಾಗಿ ಅವರು ತೋರಿದ ಬದ್ಧತೆ, ಹಾಗೂ ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ಮೂಲಕ ಅವರು ಕೃಷಿಕರ ಹಾಗೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ಸಲ್ಲಿಸಿದ ಸೇವೆಗಳು ಸದಾ ಸ್ಮರಣೀಯ. ರಾಜಕೀಯ ಸಿದ್ಧಾಂತಗಳಾಚೆಗೆ ನಿಂತು, ಸಮಾಜದ ಒಳಿತಿಗಾಗಿ ಅವರು ಸದಾ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದ ರೀತಿ ಎಲ್ಲರಿಗೂ ಮಾದರಿಯಾಗಿತ್ತು. ಅವರ ಅಗಲಿಕೆಯಿಂದ ನಾಡು ಓರ್ವ ನಿಷ್ಕಲ್ಮಶ ಸಮಾಜ ಸೇವಕನನ್ನು ಕಳೆದುಕೊಂಡಂತಾಗಿದೆ.
ಮೃತರ ಅಗಲಿಕೆಯಿಂದ ದುಃಖತಪ್ತರಾಗಿರುವ ಅವರ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ ಹಾಗೂ ಅವರ ಹಿತೈಷಿಗಳಿಗೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಸೃಷ್ಟಿಕರ್ತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ತಮ್ಮ ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.