ಸುಳ್ಯ: ಕರ್ನಾಟಕ ಸರ್ಕಾರದ ನೂತನ ಆರೋಗ್ಯ ಸಚಿವ ಯು. ಟಿ. ಖಾದರ್ ಫರೀದ್ ಅವರಿಗೆ ಸುಳ್ಯದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸನ್ಮಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಲಾಗಿರುವ ಬ್ಯಾನರ್ ಮತ್ತು ಫ್ಲೆಕ್ಸ್ ಹಾಗೂ ಆಮಂತ್ರಣಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಕೈಬಿಟ್ಟಿರುವುದು ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಸಿದ್ದರಾಮಯ್ಯ ಅವರು ಕೇವಲ ನಾಯಕರಲ್ಲ, ಅವರು ಸೈದ್ಧಾಂತಿಕ ರಾಜಕಾರಣಿ. ಐದು ವರ್ಷಗಳ ಕಾಲ ನುಡಿದಂತೆ ನಡೆದ ಆಡಳಿತ ನೀಡಿ, ನಂತರ ಪಕ್ಷಕ್ಜೆ ಡ್ಯಾಮೇಜ್ ಆಗದಂತೆ ಮೂರು ವರ್ಷಕ್ಜೆ ಅಧಿಕಾರ ಬಿಟ್ಟುಕೊಟ್ಟವರು. ದಾಖಲೆಯ ಬಜೆಟ್ ಮಂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅತಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ಯಶಸ್ವಿ ಆಡಳಿತ ನಡೆಸಿದ ಜನಪ್ರಿಯ ನಾಯಕನನ್ನು, ಅಧಿಕಾರದಿಂದ ಕೆಳಗಿಳಿದ ಕೇವಲ ಒಂದೇ ತಿಂಗಳಿನಲ್ಲಿ ಸುಳ್ಯ ಕಾಂಗ್ರೆಸ್ ನಾಯಕರು ಮರೆತುಬಿಟ್ಟರೇ? ಎಂದು ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಜನಪ್ರಿಯ ಯೋಜನೆಗಳ ಮೂಲಕ ಜನಮನ ಗೆದ್ದಿದ್ದ ಸಿದ್ದರಾಮಯ್ಯ ಅವರ ಫೋಟೋವನ್ನು ಸನ್ಮಾನದಂತಹ ದೊಡ್ಡ ಕಾರ್ಯಕ್ರಮದ ಬ್ಯಾನರ್ಗಳಿಂದ ಕೈಬಿಟ್ಟಿರುವುದು ಅಕ್ಷಮ್ಯ ಎಂದು ಕಾರ್ಯಕರ್ತರು ಆಪಾದಿಸಿದ್ದಾರೆ.
ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುವ ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ತಳಮಟ್ಟದ ಕಾರ್ಯಕರ್ತರ ಭಾವನೆಗಳನ್ನು ಸ್ಥಳೀಯ ನಾಯಕರು ಅರ್ಥ ಮಾಡಿಕೊಳ್ಳುತ್ತಿಲ್ಲ. ಅಧಿಕಾರ ಹೋದ ತಕ್ಷಣ ನಾಯಕರನ್ನು ಕಡೆಗಣಿಸುವ ಪ್ರವೃತ್ತಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬ್ಯಾನರ್ಗಳಲ್ಲಿ ಸಿದ್ದರಾಮಯ್ಯ ಅವರ ಫೋಟೋ ಇಲ್ಲದಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು,
ಅಧಿಕಾರ ಇದ್ದಾಗ ಒಂದು, ಅಧಿಕಾರ ಹೋದಾಗ ಮತ್ತೊಂದು ಮಾಡುವ ನಾಯಕತ್ವ ನಮಗೆ ಬೇಡ. ಸಿದ್ದರಾಮಯ್ಯ ಅವರು ಇಂದಿಗೂ ಕೋಟ್ಯಂತರ ಕಾರ್ಯಕರ್ತರ ಮನಸ್ಸಿನಲ್ಲಿರುವ ನಾಯಕ. ಸಚಿವ ಯು. ಟಿ. ಖಾದರ್ ಅವರ ಸನ್ಮಾನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹಾಕಿರುವ ಪ್ಲೆಕ್ಸ್ ನಲ್ಲಿ ಸಿದ್ಧರಾಮಯ್ಯ ಫೋಟೋ ಇರಲೇಬೇಕಿತ್ತು ಎಂದು ಕಾರ್ಯಕರ್ತರು ವಾದಿಸುತ್ತಿದ್ದಾರೆ.







